Pages

Wednesday, February 08, 2023

ಸಂಜೆಗವನ

 ಒಂದು ಸುಂದರ ಸಂಜೆ

ಬಾನು ಕೆಂಪಾಗುತ್ತಿತ್ತು

ಮಲ್ಲಿಗೆ ಕಂಪಡರಿತ್ತು

ಸೋನೆ ಮಳೆ ತಂಪೆರೆದಿತ್ತು

ಕಾಲ ಹೀಗೆ ನಿಂತುಬಿಡಲಿ ಎನಿಸಿತ್ತು

ಆದರೆ ಸೂರ್ಯ ಮುಳುಗಿಯೇ ಹೋದ

ಆಗ.....

ಸುತ್ತ ಕತ್ತಲು

ಬಿಚ್ಚಿದ ಕಣ್ಣೆವೆಯೂ ಮುಚ್ಚಿದ ಹಾಗೆ

ಭೋರ್ಗರೆದು ಇಳೆಗಿಳಿವ

ಬಿರುಮಳೆಧಾರೆ 

ಆತಂಕ, ಭಯದಿಂದ ಕಂಪಿಸುವವನೆದೆಗೆ

ತಂಪನೆರೆಯುತಿದೆ ಕಂಪ ಬೀರಿ 

ಅಚ್ಚಬಿಳಿಯ ಮಲ್ಲಿಗೆ

Wednesday, July 27, 2022

ಅರಳು ಮಲ್ಲಿಗೆಯ ಕನಸು

ಅರಳು ಮಲ್ಲಿಗೆಯ ಕಣ್ಣಲಿ

ಹೊಸಕನಸು ಮೂಡುತಿಹುದೇನೋ

ಆ ಕನಸು ಕಟ್ಟುವ ಬಣ್ಣದಲಿ

ನನ್ನ ಮನಸು ಮೂಡಿಹುದೇನೋ


ಅರಳು ಮಲ್ಲಿಗೆಯ ಘಮದಲಿ

ಹೊಸ ಬಾಳು ಬೆಳಗುತಿದೆಯೇನೋ

ಆ ಸುಮದ ಸೌಗಂಧದಲೆಯಲಿ

ಹೊಸ ಆಸೆ ಗರಿ ಬಿಚ್ಚಿ ಬೆಳೆಯುತಿದೆಯೇನೋ


ಅರಳು ಮಲ್ಲಿಗೆಯ ಅರೆ ಬಿರಿದ ಎಸಳುಗಳ ನಡುವೆ

ರಾಗರಂಜಿತ ಪರಾಗಭೂಷಿತ ಮಧುವೇ

ಹಾರಿ ಬಂದು ಬಾಯಾರಿ ನಿಂತ ಭ್ರಮರಕೆ

ತೃಷೆಯನಾರಿಪ ಸೂಜಿ ಚುಂಬನದ ಕನವೇ..


ಅಲ್ಲೆಲ್ಲೋ ಬಚ್ಚಿಟ್ಟ ಪುಟ್ಟ ಹೃದಯದಲಿ

ಏನಿದೆಯೋ ಏನೋ ತಿಳಿದವಳು ನೀನೇ

ನಿನ್ನ ಗುಟ್ಟುಗಳ ಹಾಗೇ ಒಟ್ಟಾಗಿ ನೋಡಿ 

ಒಗಟಾಗಿ ಕಾಡಿದರೂ, ಸಡಗರವ ಪಡುವೆ.

Thursday, February 03, 2022

ಭಯ

ಕಡಲೊಡನೆ ಬೆರೆವ ಮುನ್ನ
ನದಿಯಾಕೆ ಮೈಯೆಲ್ಲ ನಡುಕ
ಒಡಲೊಳಗೆ ಹರಿವ ಕ್ಷಣದೆ 
ತನುವ ತುಂಬೆಲ್ಲಾ ತಲ್ಲಣದ ತವಕ
ಘಟ್ಟದಲಿ ಹುಟ್ಟಿ,  ತಿಟ್ಟುಗಳ ತೆವಳಿ,  
ಬಟ್ಟಬಯಲಿನವರೆಗೆ ಪಯಣ

ಅಲ್ಲಲ್ಲಿ,

ಒತ್ತರಿಸಿ ನಿಂತ ಕಾನನದ ಗೂಡು
ಎತ್ತರಿಸಿ ನಿಂತ ಗಿರಿಸಾಲ ಬೀಳು
ಹಂಬಲಿಸಿ ನಿಂತ  ಜೀವಗಳ ಜೋಗುಳದ ಹಾಡು,    
ಹಾಡಿ ಬಂದಾಕೆ ನಿಂತಿಹಳು ಇಲ್ಲಿ
ಕೊನೆ ಮೊದಲು ಕಾಣದೀಶರಧಿಯೆದುರಿನಲಿ.

ಈ ಘಳಿಗೆ ತವಕದ ಘಳಿಗೆ, 
ಸಾಗರನ ಎದೆಯಲ್ಲಿ ಬೆಸುಗೆ,
ನದಿಗೋ, 
ಕರಗಿ ಹೋಗುವ ಭಯಕೆ
ಹಿಂತಿರುಗಿ ಓಡಿ ಹೋಗುವ ಬಯಕೆ.

ಕಾಲ ಹಿಂದೆ ಸರಿದೀತೆ,
ನದಿಯು ಬೆಟ್ಟ ಹತ್ತೀತೆ,
ಹಿನ್ನಡೆಯ ದಾರಿ ತೆರೆದೇ ಇಲ್ಲ.

ಚಳಿ ಬಿಟ್ಟು ಮುನ್ನಡೆಯಲೇಬೇಕು 
ಇಳೆ ದಾಟಿ ಸಾಗರದಲಿ ಒಂದಾಗಲೇಬೇಕು 
ಕರಗಿ ಹೋಗುವ  ಭಯವು ಕರಗಲೇಬೇಕು

ಆಗಲೇ  ಅರಿವಾಗುವುದು
ಅದು ಸಾಗರದಲಿ ಕರಗಿಹೋಗುವುದಲ್ಲ
ತಾನೇ ಸಾಗರವಾಗುವ ಸಂಭ್ರಮದ ಘಳಿಗೆಯೆಂದು.

--
ಖಲೀಲ್ ಗಿಬ್ರಾನ್ ನ Fear ಕವಿತೆಯ ಭಾವಾನುವಾದ.

Tuesday, March 13, 2018

ಗೋಕುಲದ ಹಾಡು

ಬೆಳದಿಂಗಳ ರಾತ್ರಿಯಲ್ಲಿ
ಹೊಳೆ ಹೊಳೆಯುತ ಹಾಲಿನಂತೆ 
ಯಮುನೆ ಹರಿಯುತಿದ್ದಳು


ಗೋಕುಲದ ಅಂಗಳದಲಿ
ಸಾಲು ಸಾಲು ಧೇನುಗಳು 
ಮೆಲುಕು ಹಾಕುತ್ತಿದ್ದವು 

ಮುರಳಿ ಗಾನ ಲೋಕದಲ್ಲಿ 
ರಸ ಸಾಗರ ಯಾನದಲ್ಲಿ
ಕೋಟಿ ಕೋಟಿ ಮನಸುಗಳು  ತೇಲುತಿದ್ದುವು.

ವೇಣು ನಾದ ಕೇಳಿ ಸೋತ 
ಹಿಂಡು ಹಿಂಡು  ಷೋಡಶಿಯರು
ರಾಗ ರತಿಯ ಗುಂಗಿನಲ್ಲಿ ಮುಳುಗುತಿದ್ದರು.

ಕೊಳಲ ದನಿಯ ಮಿಡಿಸುವವನೋ
ಜಗವನೆಲ್ಲ ಕುಣಿಸುವವನೋ 
ಅವನ ಪ್ರೀತಿ ಬೇಡಿ ಬೇಡಿ ಹಾಡುತಿದ್ದರು.

ಎಲ್ಲರೊಡನೆ ನಲಿವ ಅವನು 
ಇನಿದನಿಯ ಗೀತೆ ಅವನು 
ಜಗವನೆಲ್ಲ  ಪ್ರೀತಿಯಿಂದ ಗೆಲ್ಲುತಿದ್ದನು.

ಅದರವನ ಮನದ ತುಂಬ
ರಾಧೆಯೆಂಬ ಪ್ರೀತಿ ಬಿಂಬ
ಅವಳ ನೆನಪ ತುಂಬಿಕೊಂಡು ಹಾಡುತಿದ್ದನು.

ಅವಳ ಪ್ರೀತಿ ಧಾರೆಗಾಗಿ 
ವಿರಹದುರಿಯ ಶಮನಕಾಗಿ 
ರಾಧೇ ರಾಧೆ ಎಂದು ಅವನು ಕಾಯುತಿದ್ದನು 

Thursday, March 30, 2017

ಆಕಾಶ ಭೂಮಿಗಳ ಒಂದು ಮಾಡಿ ನಿಂತ....

ಜಗದ ಶಕ್ತಿಗಳೆಲ್ಲ ಒಂದಾಗಿ ನಿಂತಿತೋ
ಜಗವೆಲ್ಲಾ ಆಕ್ರಮಿಸಿ ಈ ಆಕಾರ ಬಂದಿತೋ
ಕರಿಮುಗಿಲೆ ಕೇಶವೊ
ಸೂರ್ಯ-ಚಂದ್ರರೇ ನಯನಗಳೊ
ಸುಳಿವ ಮಿಂಚುಗಳೆ ನಗೆಯೊ
ಸಿಡಿಲುಗುಡುಗಳೆಲ್ಲ ನೀನಾಡುವ ನುಡಿಯೊ
ಮೇರುಪರ್ವತವೇ ನೀ ಹಿಡಿದ ಗದೆಯೊ
ಪಾದಕಮಲಗಳೆರಡು ಪಾತಾಳದಲ್ಲಿದೆಯೊ
ಅಂಜನಾತನಯ ವೀರಾಂಜನೇಯ ಮಾರುತಿರಾಯ
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳ ಕೋರೈಸುವ ಕಾಂತಿ ಚೆಲ್ಲುವ, ಈ ಭವ್ಯ ರೂಪವೇನು
ನೋಡುವ ಬಗೆ ಹೇಗೆ ನಿನ್ನ ಬೇಡುವ ಬಗೆ ನಿನ್ನ
ಪಾದ ಹುಡುಕಲಾರೆ ಹನುಮ ಮೊಗವ ಕಾಣಲಾರೆ;
ಕೋಟಿ ಕಣ್ಣು ಸಾಲದಯ್ಯ ನಿನ್ನ ರೂಪ ತುಂಬಿಕೊಳಲು
ಹೇಗೆ ನಿನ್ನ ಕಾಣಲಯ್ಯ ಹೀಗೆ ನಿಲ್ಲಲು;
ನಿಂತ ರೀತಿಯೋ ತನುವ ಕಾಂತಿಯೋ
ಉರಿವ ಸೂರ್ಯ ಹಣತೆ ದೀಪದಂತೆ ಕಾಣುತಿರಲು ಹೀಗೆ
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ನಿನ್ನ ಉಸಿರ ಬಿಸಿಗೆ ಹೆದರಿ ನದಿಗಳಾವಿಯಾಗುತಿರಲು
ದಿವ್ಯ ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು;
ನಿನ್ನ ಭಾರ ತಾಳೆನೆಂದು ಭೂಮಿ ಕುಸಿದು ಹೋಗುತಿರಲು
ಎಲ್ಲಿ ನಾನು ನಿಲ್ಲಲಯ್ಯ ನಿನ್ನ ನೋಡಲು;
ರೋಮ ರೋಮದಿ ರಾಮನಾಮವು
ರೋಮ ರೋಮದಿ ರಾಮನಾಮವು;
ಶಂಖನಾದ ತಾಳವಾದ್ಯ
ಶಂಖನಾದ ತಾಳವಾದ್ಯ ದಶದಿಕ್ಕಲು ಮೊಳಗುತಿರಲು
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳೆಲ್ಲ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳ ಕೋರೈಸುವ ಕಾಂತಿ ಚೆಲ್ಲುವ, ಈ ಭವ್ಯ ರೂಪವೇನು
ಸಾಹಿತ್ಯ: ಚಿ. ಉದಯಶಂಕರ

Wednesday, February 15, 2017

ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್



ನಾಸ್ಟ್ರಡಮಸ್ ನುಡಿದ ಭವಿಷ್ಯವೋ, ಮೈಲಾರ ಲಿಂಗದ  ಗೊರವಪ್ಪ ನುಡಿದ ಕಾರ್ಣಿಕವೋ, ಅಥವಾ ಕೊಡೀ ಮಠದ ನಾಡೀ ಗ್ರಂಥದ ನುಡಿಗಳೋ, ಒಟ್ಟಿನಲ್ಲಿ ಎಲ್ಲವೂ ಒಗಟು ಒಗಟು.  ಅದರೊಳಗಣ ಒಗಟು ಸರಳವಾದದ್ದು. ಕಾರ್ಣಿಕದ ಕಾಣ್ಕೆ ಅವರವರ ಮನಸಿಗೆ ಅವರ ಭಾವಕ್ಕೆ,  ಅಳತೆ –ವ್ಯಾಪ್ತಿ –ಪ್ರಾಪ್ತಿಗಳಿಗೆ ಬಿಟ್ಟದ್ದು.

ಈ ವರ್ಷದ ಮೈಲಾರ ಲಿಂಗನ ಕಾರ್ಣಿಕ ನುಡಿದ “ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್” ಎನ್ನುವ ಕಾರಣಿಕದ ಅರ್ಥ  ಹುಡುಕುತ್ತಾ ಎರಡು ರಾತ್ರಿಗಳೇ ಕಳೆದು  ಹೋದವು. ಈ ಘಳಿಗೆಯಲ್ಲಿ ನನಗೆ ಹೊಳೆದಿದ್ದನ್ನು ಇಲ್ಲಿ ಬರೆಯುತ್ತಿದ್ದೇನೆ.
ಮಾಡಿಟ್ಟ ಅಡಿಗೆ ಹಾಗೇ ಕಾಯುತ್ತಾ ಉಳಿದು ಹಲಸಿ ಹೋಗುವುದು ಯಾವಾಗ..? ಊಟಕ್ಕೆ ಹಕ್ಕುದಾರನಾದ ಯಜಮಾನ ಬರದೇ ಹೋದಾಗ ತಾನೇ?  ಅವನು ಮನೆಗೆ ಬರದಿದ್ದರೆ, ಅಡಿಗೆ ಮಾಡಿದ ಗೃಹಿಣಿಯೂ ಹಸಿದೇ ಕಾಯುವಳು. ಮಾಡಿಟ್ಟ ಅಡಿಗೆ ತನ್ನ ಸಮಯ ಮುಗಿಯುತ್ತಿದ್ದಂತೆ ಹಳಸಿ ಹೋಗುವುದು. ಈ ಯಜಮಾನ ತನ್ನ ಕಾಯುತ್ತಿರುವ ಮಡದಿ ಮಕ್ಕಳನ್ನೂ ಬಿಟ್ಟು ಹೊರಗಿರುವನೆಂದರೆ, ಅವನೇನು ದಂಡಿನಲ್ಲಿರುವವನೇ? ಶತ್ರುಗಳ ಸೈನ್ಯ ಏರಿ ಬಂದಿದೆಯೇ? ದೇಶ ಕಾಯುತ್ತಾ.. ತನ್ನ ಕಾಯುತ್ತಿರುವ ಮಡದಿ ಮಕ್ಕಳು ಮತ್ತು ಅಂಬಲಿಯನ್ನು ಮರೆತು ಬಿಟ್ಟನೇ? ಅವನಿಗೆ ಕಾದು ಮಡದಿ ಮಕ್ಕಳು ಸುಸ್ತಾದರೇ?
ಜವರಾಯ ಕಂಬಳಿ ಬೀಸಿ ಕಾಯುತ್ತಿರುವನೇ? ಕಾಯುತ್ತಿರುವ ಮಡದಿ ಮಕ್ಕಳನ್ನು ಕಾಯಿಸಿ, ಮಾಡಿಟ್ಟ ಅಂಬಲಿ ಹಳಸಿ, ಮನೆಯೊಡೆಯ ಜವರಾಯನ ಕಂಬಳಿ ಹೊದ್ದು ಹೊರಟುಬಿಟ್ಟನೇ ?
ಅಂದರೆ ನಮ್ಮ ಮುಂದೆ ಯುದ್ದವೊಂದು ಬರಲಿದೆಯೇ..?


Wednesday, August 24, 2016

ದೆವ್ವದ ಮುಖವಾಡ



ದೆವ್ವದ ಮುಖವಾಡ

ನನ್ನ ಮನೆ ಹಾಲಿನಲ್ಲಿ  ವಾರ್ನೀಸು ಹಚ್ಚಿ
ಮಿಂಚುತ್ತಿರುವ ಮುಖವಾಡ.
ಅದೋ..ದೆವ್ವದ ಮುಖವಂತೆ ...!
ಆದರೆ,
ವಿಶಾಲ ಹಣೆ, ಮೇಲೆ ಉಬ್ಬಿದ ನರ,
ಅಬ್ಬಯ್ಯಾ..., ದೆವ್ವಕ್ಕೆಷ್ಟು ಕೆಲಸದ ಭಾರ.
ಅಯ್ಯೋ ಪಾಪ....!!!
ಬರ್ಟೋಲ್ಟ ಬ್ರೆಕ್ಟ್ ನ  " ದಿ ಮಾಸ್ಕ್ ಆಫ್ ಈವಿಲ್ "  ಪದ್ಯದ ಭಾವಾನುವಾದ

The Mask Of Evil
 
On my wall hangs a Japanese carving,
The mask of an evil demon, decorated with gold lacquer.

Sympathetically I observe
The swollen veins of the forehead, indicating
What a strain it is to be evil.