Pages

Saturday, February 23, 2013

ಅಳೆಯಲಾಗದ ಒಲವು


ಆ ಸಂಜೆಯಲಿ ನಿನ್ನಿಂದ ದೂರ ನಡೆವಾಗ
ನನ್ನೆದೆಯಲಿದ್ದ ಒಲವನ್ನು ಅಳೆಯಲಾರೆ.
ಕಾಪಿಟ್ಟ  ನೀಲಿ ಕಾನನದಲಿ ಕಣ್ಮರೆಯಾದಾಗ
ಪಡುವಣದ ಬಾನಿನಲಿ ತಾರೆಗಳ ಎಣಿಸಲಾರೆ.

ಇನಿತಾದರೂ ನಗೆಯ ಸುಳಿವಿರಲಿಲ್ಲ, ಅಂದು
ಕಾಣದ ವಿಧಿಯಡೆಗೆ ನಾ ನಡೆಯುವಂದು.
ಬೆನ್ನ ಹಿಂದಿನ ಮುಖಗಳು ಮಸುಕಾಗಿ
ನೀಲಿ ಕಾನನದ ಸಂಜೆಯಲ್ಲಿ ಕರಗಿಹೋದಂದು

ಆ ರಾತ್ರಿ ಬಲು ಸೊಬಗು, ಬಹು ಸೊಬಗು
ಹಿಂದೆಂದು ಕಾಣದ್ದು, ಮುಂದೆ ಕಾಣಬರದು.
ನಿಜ ನುಡಿಯಲೇ,  ಆ ಸಂಜೆ ನನ್ನ ಬಳಿ ಉಳಿದದ್ದು..
ನೀಲಿ ಕಾಡಿನ ದೊಡ್ಡಹಕ್ಕಿಗಳು ಮತ್ತದರ ಹಸಿವಿನ ಕೂಗು.


ಬರ್ಟೋಲ್ಟ್ ಬ್ರೆಷ್ಟ್ ಕವಿಯ  "Ich habe dich nie je so geliebt "   ಪದ್ಯದ ಭಾವಾನುವಾದ.  

ಮೂಲದ ಕವಿತೆಯ ಇಂಗ್ಲಿಷ್ ಅನುವಾದ ಕೆಳಗಿನಂತೆ.

Ich habe dich nie je so geliebt

I never loved you more, ma soeur
Than as I walked away from you that evening.
The forest swallowed me, the blue forest, ma soeur
The blue forest and above it pale stars in the west.

I did not laugh, not one little bit, ma soeur
As I playfully walked towards a dark fate -
While the faces behind me
Slowly paled in the evening of the blue forest.

Everything was grand that one night, ma soeur
Never thereafter and never before -
I admit it: I was left with nothing but the big birds
And their hungry cries in the dark evening sky.







Thursday, February 21, 2013

ಹುರುಳಿ ಕಟ್ಟಿನ ಸಾರು.


ಕರ್ನಾಟಕದ ಅಧ್ಬುತ ಅಡಿಗೆಗಳಲ್ಲೊಂದು ಹುರುಳಿ ಕಟ್ಟಿನ ಸಾರು.  ಯುಧ್ಧಕ್ಕೆ ಹೊರಟ ಯೋಧರ ಕುದುರೆಗಳಿಗೆ ಬೇಯಿಸಿದ ಹುರುಳಿಯನ್ನು ತಿನ್ನಿಸಿದರೆ, ಹುರುಳಿಕಟ್ಟನ್ನು ಮಸಾಲೆ ಸೇರಿಸಿ, ರುಚಿಕಟ್ಟಾದ ವಾರಗಟ್ಟಲೆ ಕೆಡದ ಹಾಗೆ ಸಾರು ಮಾಡಿ ಚಪ್ಪರಿಸಿ ಹೊಡೆಯುವುದು ಪಟುಭಟರಿಗೆ ಬಿಟ್ಟ ವಿಚಾರ.

ಇಲ್ಲಿ ಈ ಸಾರನ್ನು ಹೇಗೆ ಮಾಡಬೇಕೆಂದು ನಮ್ಮಕ್ಕ ಹೇಳಿಕೊಟ್ಟಿದ್ದನ್ನು ಬರೆದಿದ್ದೇನೆ.

ಎರಡು ಪಾವು ಹುರುಳಿ ಕಾಳಿಗೆ ಏಳೆಂಟು ಪಾವುಗಳಷ್ಟು ನೀರು ಸೇರಿಸಿ, ಬೇಯಿಸಿಕೊಳ್ಳಬೇಕು.  ಸೌದೆ ಒಲೆಯಲ್ಲಿ ಮಾಡುವುದಾದರೆ ಒಳ್ಳೆಯದು.  ಆ ಅವಕಾಶ ಇಲ್ಲವಾದರೆ, ಪ್ರೆಶರ್ ಕುಕರ್‌ನಲ್ಲಿ ಮೂರು ಸಿಳ್ಳೆ ಹೊಡೆಸಬೇಕು.  ಬೇಯಿಸಲು ಉಪ್ಪು ಸೇರಿಸಬಾರದು. ಇದಾದ ಮೇಲೆ ಮತ್ತೆ ರುಚಿಗೆ ಬೇಕಷ್ಟು ಉಪ್ಪು ಸೇರಿಸಿ ಮತ್ತೆ ಮೂರು ಸಿಳ್ಳೆ ಹೊಡೆಸಬೇಕು.

ಒಂದು ಚಮಚೆ ಉದ್ದಿನಬೇಳೆ, ಒಂದು ಚಮಚೆ ಕಡ್ಲೇಬೇಳೆ, ಧನಿಯಾ ಮೂವತ್ತು ಗ್ರಾಂಗಳಷ್ಟು, ಒಣಮೆಣಸಿನಕಾಯಿ ೬-೫, ಒಣಕೊಬ್ಬರಿ, ಕರಿಬೇವಿನ ಸೊಪ್ಪು ಚಕ್ಕೆ, ಲವಂಗ, ಜೀರಿಗೆ, ಮೆಣಸು ಇವನ್ನು ಹುರಿದುಕೊಳ್ಳಬೇಕು. ೪೦೦ ಗ್ರಾಂಗಳಷ್ಟು ಈರುಳ್ಳಿಯ ಜೊತೆಗೆ ಹುರಿದ ಮಸಾಲೆ ಸಾಮಗ್ರಿಗಳನ್ನು ಸೇರಿಸ್, ಜೊತೆಗೆ ಹುಣಸೇಹಣ್ಣಿನ ರಸ ಸೇರಿಸಿ ರುಬ್ಬಿಕೊಳ್ಳಬೇಕು.

ಬೇಯಿಸಿದ ಕಟ್ಟಿನಿಂದ ಕಾಳನ್ನು ಬೇರೆ ಮಾಡಿಕೊಳ್ಳಬೇಕು.  ಇನ್ನೊಂದು ಪಾತ್ರೆಯಲ್ಲಿ ಜೀರಿಗೆ, ಸಾಸುವೆ, ಕರಿಬೇವು ಮತ್ತು ಒಣಮೆಣಸಿನಕಾಯಿ ಒಗ್ಗರಣೆ ಮಾದಿಕೊಂಡು, ಅದಕ್ಕೆ ಕಟ್ಟನ್ನು ಸೇರಿಸಿ,  ಆಡಿಸಿದ ಮಸಾಲೆಯನ್ನು ಸೇರಿಸಿ, ಚೆನ್ನಾಗಿ ಕುದಿಸಬೇಕು.  ಮೊದಲ ದಿನ ಸಾರು ತೆಳುವಾಗಿದ್ದರೆ ಅಡ್ಡಿಯಿಲ್ಲ.  ಎರಡು ದಿನಗಳ ಕಾಲ ದಿನಕ್ಕೆ ಎರದು ಹೊತ್ತು ಕುದಿಸಿ ಇಳಿಸಬೇಕು.  ಮೂರನೇ ದಿನಕ್ಕೆ, ಬಿಸಿ ಅನ್ನದ ಜೊತೆಗೆ, ತುಪ್ಪ ಹಾಕಿಕೊಂಡು ಕಟ್ಟಿನ ಸಾರಿನ ರುಚಿ ನೋಡಿ.. ಆಮೇಲೆ ಮಾತನಾಡಿ.

ಅಂದಹಾಗೆ,  ಬೇಯಿಸಿದ ಹುರಳಿ ತಿನ್ನಿಸಲು ನಮ್ಮಬಳಿ ಕುದುರೆಯಿಲ್ಲವಲ್ಲಾ..? ತೊಂದರೆಯಿಲ್ಲ.  ಅದಕ್ಕೆ ಒಗ್ಗರಣೆ ಹಾಕಿ ಪಲ್ಯ ಮಾಡಿದರೆ, ಊಟದ ಜೊತೆಗೆ ನಂಜಿಕೊಳ್ಳಬಹುದು,  ಸ್ವಲ್ಪ ಬೆಲ್ಲ, ಎಸೆನ್ಸ್ ಸೇರಿಸಿ, ನುಣ್ಣಗೆ ರುಬ್ಬಿಕೊಂಡರೆ, ಹುರುಳಿ ಸೀಕರಣೆ ಸಿದ್ದ.  ಹಾಗೇ ಸಾರು ತುಂಬಾ ತೆಳುವೆನಿಸಿದರೆ, ಸ್ವಲ್ಪ ಹುರುಳಿಯನ್ನು ರುಬ್ಬಿ, ಸಾರಿನೊಂದಿಗೆ ಸೇರಿಸಬಹುದು.


ಮತ್ತೂ ಮುಂದಿನ ವಿಷಯವೆಂದರೆ, ಮಾಂಸಾಹಾರಿ ಪ್ರಿಯ ಸ್ನೇಹಿತರಿಗೆ, ಮೊದಲನೇ ದಿನದ ಹುರುಳಿಕಟ್ಟಿನ ಸಾರಿಗೆ, ಕೈಮ-ಉಂಡೆಗಳನ್ನು ಸೇರಿಸಿ ಬೇಯಿಸಬಹುದು,  ಅದು ಖಾಲಿಯಾಗಿ ಸಾರು ಹಾಗೇ ಇದ್ದರೆ, ಮೊಟ್ಟೆಯನ್ನು ಬೇಯಿಸಿ ಸೇರಿಸಬಹುದು,  ಇನ್ನೂ ತಿಳಿಯಾದ ಸಾರು ಉಳಿದಿದ್ದರೆ, ಆಲೂಗೆಡ್ಡೆಯನ್ನು ಸೇರಿಸಬಹುದು, ಸಾರಿನ ಜೊತೆಗೆ ನಂಜಿಕೊಳ್ಳಲು ಇದು ತರಕಾರಿಯಾಗುತ್ತದೆ.


ನಿಜವಾದ ಹುರುಳಿ ಕಟ್ಟಿನ ರುಚಿ ನೋಡಬೇಕೆಂದರೆ, ತಪ್ಪಲೆ ತುಂಬಾ ಮಾಡಿದ ಸಾರು ಚೆನ್ನಾಗಿ ಕುದ್ದು, ದೊಡ್ಡ ಚಂಬಿನಷ್ಟಾದಾಗ, ಪೇಸ್ಟಿನಷ್ಟು ಗಟ್ಟಿಯಾದಾಗ ಅದನ್ನು ಬಾಟಲಿನಲ್ಲಿ ತುಂಬಿಸಿಟ್ಟುಕೊಳ್ಳಬಹುದು. ಇದು ತಿಂಗಳಾದರೂ ಕೆಡದೆ ಉಳಿಯುತ್ತದೆ. ಒಂದು ಬಟ್ಟಲು ಅನ್ನಕ್ಕೆ ಒಂದೇ ಚಮಚ ಸಾರು ಈ ಸ್ಥಿತಿಯಲ್ಲಿ ಸಾಕಾಗುತ್ತದೆ. ಅದರ ರುಚಿಯನ್ನು ಅನುಭವಿಸಿಯೇ ತಿಳಿಯಬೇಕು.