Pages

Wednesday, March 21, 2012

ಒಂದು ಹಳೆಯ ಕತೆಯನ್ನು ಹಿಡಿದು...

ಬಹಳ ಹಿಂದೆ ಹೊಯ್ಸಳರ ಕಾಲದ ಕತೆಯಂತೆ ಇದು. ಎಲ್ಲಿ ಓದಿದ್ದೋ, ಕೇಳಿದ್ದೋ ಸರಿಯಾಗಿ ನೆನಪಿಲ್ಲ. ಆದರೆ ಕತೆ ಮಾತ್ರ ಮರೆಯುವಂತಹುದಲ್ಲ. ನೀವು ಅದನ್ನು ಕೇಳುವಿರಾ..?

ಒಮ್ಮೆ ಸಾಮ್ರಾಜ್ಯದಲ್ಲಿ ಬರ ಬಂದು, ಅಗತ್ಯವಸ್ತುಗಳ ಅಭಾವ ಜನಸಾಮಾನ್ಯರಿಗೆ ಉಂಟಾಯಿತಂತೆ, ರಾಜನಿಗೆ ಆಶ್ಚರ್ಯ. ಹೋದವರ್ಷದ ಬೆಳೆ ಸಮೃದ್ದವಾಗಿದ್ದು, ದಾಸ್ತಾನೂ ಸಾಕಷ್ಟಿರುವಾಗ, ಅಭಾವ ಹೇಗೆ?. ಸರಿ ಮಂತ್ರಿಯನ್ನ್ನು ಕೇಳಿದ. ಮಂತ್ರಿ ನಗುತ್ತಾ ಹೇಳಿದ, "ಪ್ರಭು, ವ್ಯಾಪಾರಂ ದ್ರೋಹ ಚಿಂತನಂ ಎನ್ನುವ ಮಾತುಂಟು, ನಮ್ಮ ವ್ಯಾಪಾರಸ್ಥರು ಇಂತಹ ಅವಕಾಶ ಬಿಟ್ಟಾರೆಯೇ? ಕೃತಕ ಅಭಾವ ಸೃಷ್ಟಿಸಿದ್ದಾರೆ. ಅದನ್ನು ಈಚೆ ತಂದರರಾಯಿತು" ಎಂದ.

ರಾಜನಿಗೆ ಮತ್ತೂ ಆಶ್ಚರ್ಯ. "ಏನೆಂದೆ..? ನಮ್ಮ ವರ್ತಕರು ನಿಯತ್ತಿನವರು, ಅಲ್ಲದೆ ನನ್ನ ರಾಜ್ಯದಲ್ಲಿ ಅವರಿಗೆ ರಾಜಭಯವಿದೆ. ಕೃತಕ ಅಭಾವ ಸೃಷ್ಟಿಸುವ ಧೈರ್ಯ ಮಾಡುವರೇ?" ಎಂದ.

"ಪ್ರಭೂ, ರಾಜಭಯ, ನಿಯತ್ತು ಬೇರೆ, ವ್ಯಾಪರೀ ವೃತ್ತಿಯೇ ಬೇರೆ" ಎಂದ ಮಂತ್ರಿ.

"ನಾನು ನಂಬಲಾರೆ"

"ಹಾಗಿದ್ದರೆ ಸಣ್ಣದೊಂದು ಪರೀಕ್ಷೆ ಮಾಡೋಣ ಬಿಡಿ, ನಿಮಗೂ ನಿಜ ಗೊತ್ತಾಗುತ್ತದೆ."

"ಸರಿ ಹಾಗೇ ಆಗಲಿ" ಅಂದ ರಾಜ.

ಊರಿನ ಪೇಟೆ ಬೀದಿಯಲ್ಲಿ ಡಂಗೂರ ಸಾರುವಂತೆ ಹೇಳಿದ ಮಂತ್ರಿ. "ಅರಮನೆಗೆ ಹಾಲಿನ ಕೊರತೆ ಬಂದಿರುವುದರಿಂದ ಊರಿನಲ್ಲಿರುವ ಎಲ್ಲಾ ವರ್ತಕರೂ ಒಂದೊಂದು ತಂಬಿಗೆ ಹಾಲನ್ನು ಅರಮನೆಗೆ ನಾಳೆ ನೀಡತಕ್ಕದ್ದು" ಎನ್ನುವುದು ಡಂಗೂರದ ಸಾರಾಂಶ.

ಅರಮನೆಯ ಮುಂದೆ, ದೊಡ್ಡ ಕೊಳಗ ಇರುವಂತೆ ವ್ಯವಸ್ಥೆ ಮಾಡಿದ ಮಂತ್ರಿ, ಅದರ ಬಾಯಿಗೆ ಬಿಳಿಯ ಶುಭ್ರ ವಸ್ತ್ರವೊಂದನ್ನು ಕಟ್ಟಿಸಿದ. ಒಳಗಿರುವುದು ಏನೆಂದು ಹೊರಗಿನವರಿಗೆ ಕಾಣದು. ವರ್ತಕರು ಇದನ್ನು ನೋಡಿದರು. ಅವರ ವರ್ತಕ ಬುಧ್ಧಿ ಕೆಲಸ ಮಾಡಿತು. ಹೇಗೂ ಬಾಯಿಗೆ ಬಟ್ಟೆ ಇದೆ, ಒಳಗಿರುವುದು ಕಾಣದು, ಎಲ್ಲರೂ ಹಾಲು ತಂದರೆ, ನಾನೊಬ್ಬ ನೀರು ಹಾಕಿದರೆ ತಿಳಿಯುವುದಾದರೂ ಯಾರಿಗೆ..? ಆದರೆ ಇದು ಒಬ್ಬಿಬ್ಬರಿಗೆ ಹೊಳೆಯಲಿಲ್ಲ. ಊರಿನ ಎಲ್ಲರೂ ಹಾಗೆ ಯೋಚಿಸಿದರು.

ಮಧ್ಯಾಹ್ನಕ್ಕೆ ಕೊಳಗ ತೆಗೆಸಿ ನೋಡಿದರೆ, ಒಳಗೆ ಬರೀ ನೀರು. ರಾಜನಿಗೆ ಕೆಂಡದಂತ ಕೋಪ. "ಎಲ್ಲಾ ವರ್ತಕರನ್ನೂ ಹಿಡಿದು ನೇಣಿಗೇರಿಸಿ" ಎಂದುಬಿಟ್ಟ. ಮಂತ್ರಿ ಬುದ್ದಿವಂತ. " ಹಾಗೆ ಮಾಡಿದರೆ, ಅರಾಜಕತೆ ನಾವೇ ಸೃಷ್ಟಿಸಿದಂತಾಗುತ್ತದೆ" ಎಂದ. "ಅಂದರೆ ಇವರನ್ನು ಸುಮ್ಮನೆ ಬಿಡಬೇಕೆ?" ರಾಜನದು ರುದ್ರಾವತಾರ. "ಇಲ್ಲ ಇಲ್ಲ " ಮಂತ್ರಿ ಹೇಳಿದ ಇವರಿಗೆ ತಕ್ಕ ಪಾಠ ಕಲಿಸದೆ ಬಿಟ್ಟರೆ, ನಮ್ಮ ಮೇಲೇ ಏರಿ ಬರುತ್ತಾರೆ. ಅವರಿಗೆ ಪಾಠದ ವ್ಯವಸ್ಥೆಯೂ ಮಾಡಿದ್ದೇನೆ".

ಮರುದಿನ ವರ್ತಕರಿಗೊಂದು ಅಹ್ವಾನ ಹೋಯಿತು, ವರ್ತಕರ ಔದಾರ್ಯದಿಂದ ಸಂತಸಗೊಡ ಪ್ರಭುಗಳು, ಅವರಿಗೊಂದು ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ, ಸರ್ವರೂ ನಿಗದಿತ ಸಮಯಕ್ಕೆ ಅರಮನೆಯ ಹಜಾರದಲ್ಲಿ ಸೇರತಕ್ಕದ್ದು. ಎನ್ನುವುದು ಅಹ್ವಾನದ ಸಾರಾಂಶ. ಸರಿ ಎಲ್ಲರೂ ಸಂತಸಗೊಂಡರು, ನೀರು ಹಾಕಿದವರು ತಮ್ಮ ತಪ್ಪನ್ನು ಯಾರೂ ಕಾಣಲಿಲ್ಲವೆಂಬ ಸಂತಸದ ಜೊತೆಗೆ, ರಾಜನಿಂದ ಸನ್ಮಾನ. ಭಲೇ! ಭಲೇ!!

ಒಟ್ಟಾಗಿ ಎಲ್ಲರೂ ನಿಗದಿತ ಸಮಯದಲ್ಲಿ ನಿಗದಿತ ಜಾಗದಲ್ಲಿ ಸೇರಿದರು. ಸಾರ್ವಜನಿಕ ಸನ್ಮಾನ ನಿರೀಕ್ಷಿಸಿದವರಿರೊಂದು ಅಚ್ಚರಿ. ಒಬ್ಬೊಬ್ಬರನ್ನಾಗಿ ಒಳಗೆ ಕರೆದು ಸನ್ಮಾನ ಮಾಡುತ್ತಿದ್ದಾರೆ. ಒಳಗೇನು ನಡೆಯುತ್ತಿದೆ, ಹೊರಗಿನವರಿಗೆ ತಿಳಿಯುವಂತಿಲ್ಲ. ಒಳಗಿಂದ ಹೊರಹೋಗುವುದೇ ಬೇರೆ ಬಾಗಿಲಿನಿಂದ.

ಒಳಗೆ ನಡೆಯುವುದಾದರೂ ಏನು?

ರಾಜ ಒಬ್ಬೊಬ್ಬರಿಗೂ ಕೇಳುತ್ತಾನೆ, "ಏನಯ್ಯಾ, ರಾಜಾಜ್ಣೆ ಮೀರುವಷ್ಟು ಸೊಕ್ಕೆ ನಿನಗೆ? ಹಾಲು ಬೇಕೆಂದು ಕೇಳಿದರೆ ನೀರು ಕೊಡುತ್ತೀಯೋ?"
ಇವನಿಗೋ ಅಚ್ಚರಿ ತಾನು ನೀರು ಹಾಕಿದ್ದನ್ನು ಇವರು ಕಂಡುಕೊಂಡದ್ದಾದರೂ ಹೇಗೆ? ಇವರ ಗೂಢಚಾರರು ಎಷ್ಟು ಗಟ್ಟಿ.. ತಪ್ಪೊಪ್ಪಿಕೊಂಡರೆ ಬದುಕೇನು, ಎನ್ನುವ ಭಾವ. "ತಪ್ಪಾಯಿತು ಬುದ್ಧಿ, ಮಣ್ಣು ತಿನ್ನುವ ಕೆಲಸ ಮಾಡಿದೆ, ನನ್ನನು ಈ ಬಾರಿ ಕ್ಷಮಿಸಿ"
"ನಿನ್ನ ತಪ್ಪಿಗೆ ತಲೆ ತೆಗೆಯದೆ ಬಿಡುವುದು ದೊಡ್ಡದು, ಹತ್ತು ಛಡಿ ಏಟು ತಿಂದು ಸೀದಾ ಮನೆಗೆ ನಡೆ. ಯಾರ ಬಳಿಯಾದರೂ ಕೆಮ್ಮಿದರೆ, ಗಂಟಲು ಸೀಳಿ ಹೋದೀತು"
ಛಡಿ ತಿಂದು ತಲೆ ತಗ್ಗಿಸಿ, ಬೇರೆ ಬಾಗಿಲಿಂದ ಮನೆ ಸೇರಿಕೊಳ್ಳುವುದಷ್ಟೇ ವರ್ತಕರಿಗೆ ಉಳಿದದ್ದು.

ಈ ಕತೆ ನೆನಪಿಗೆ ಬರಲು ನನಗೆ ಎರಡು ಕಾರಣಗಳು, ಸಿಗರೇಟು ಸೇದುವವರಿಗೆ, ಇದು ಈಗಾಗಲೇ ಯಾಕೆಂದು ತಿಳಿದಿರಬಹುದು. ಮುಕ್ತ ಮಾರುಕಟ್ಟೆಯ ಈ ವ್ಯವಸ್ಥೆಯಲ್ಲಿ, ಏಕಸ್ವಾಮ್ಯದ ಸಿಗರೇಟು ಕಂಪನಿಯ ಸಿಗರೇಟುಗಳು ಕಾಳ ಮಾರುಕಟ್ಟೆಯಲ್ಲಷ್ಟೇ ಬಿಕರಿಯಾಗುತ್ತಿವೆ. ಬಜೆಟ್ ನ ಪರಿಣಾಮ ಇದು. ದಿನಬಳಕೆಯ ವಸ್ತುಗಳಿಗೆ ಈ ಸ್ಥಿತಿ ಬರುವುದಿಲ್ಲವೋ, ನನಗಂತೂ ಅನುಮಾನ. ಬಂದೇ ಬರುತ್ತದೆ ಎನ್ನುವುದು ನನ್ನ ನಂಬಿಕೆ. ಕಾಲವೇ ಉತ್ತರಿಸಬೇಕು. ಆದರೆ ಆ ರಾಜನ ಮಂತ್ರಿಯಂತ ಮಂತ್ರಿಗಳು ಈಗಿಲ್ಲ ಎನ್ನುವುದು ಸತ್ಯ.

ಆಷ್ಟೇ ಅಲ್ಲ. ಇನ್ನೊಂದು ಕಾರಣದಿಂದ ಈ ಕತೆ ನೆನಪಿಗೆ ಬಂತು. ಅದಕ್ಕೆ ಕಾರಣ ನಾನು ಇತ್ತೀಚಿಗೆ ಓದಿದ ಪುಸ್ತಕ. "ಭಾರತೀಯರಾಡುವ ಆಟಗಳು (Games Indian Play)" ಎನ್ನುವ ರಘುನಾಥನ್ ಎನ್ನುವವರು ಬರೆದದ್ದು. ಇದಕ್ಕೆ ಮುನ್ನುಡಿ ನಮ್ಮ ಇನ್ಫೋಸಿಸ್ ಅಧ್ಯಕ್ಶ ನಾರಾಯಣ ಮೂರ್ತಿಯವರದು. ಅದರಲ್ಲಿ ಲೇಖಕರು ಈ ಕತೆಯನ್ನೂ ಬೇರೆ ರೀತಿಯಲ್ಲಿ ಬರೆದಿದ್ದಾರೆ. ಗೇಮ್ ಥಿಯರಿಯ ಹಿನ್ನೆಲೆಯಲ್ಲಿ, ಭಾರತೀಯರ ಮನಸ್ಸತ್ವವನ್ನು ತೆರೆದಿಡುವ ಪುಸ್ತಕ ಅದು. ತಕ್ಷಣದ ಲಾಭಕ್ಕಾಗಿ ಲೋಭಿಗಳಾಗಿ, ಸಮಷ್ಟಿ ಲಾಭವನ್ನು ಕಡೆಗಣಿಸುವ ಭಾರತೀಯತೆಯನ್ನು ಉದಾಹರಣೆ ಸಮೇತ ಅವರು ವಿವರಿಸುತ್ತಾರೆ. ವೀರಪ್ಪನ್ ಡೈಲಮಾ ಎನ್ನುವ ಕಲ್ಪನೆಯೊಂದಿಗೆ ವಸ್ತುಸ್ಥಿತಿಯನ್ನು ವಿವರಿಸುವ ಪರಿ ಚಿಂತನೆಗೆ ಹಚ್ಚುವಂತಿದೆ. ಗೀತೆಯಲ್ಲಿ ಗೇಮ್ ಥಿಯರಿ ಅಳಕವಾಗಿದೆ ಎಂದು ವಾದಿಸುವ ಲೇಖಕರ ಮಾತು ಸತ್ಯವಿರಲೂ ಬಹುದು. ಆದರೆ, ಭಾರತೀಯ ಸಮುದಾಯದ ಈ ಲೋಭಿ ಬುದ್ದಿಗೆ ಛಡಿ ನೀಡಿ ತಿದ್ದಬಲ್ಲ ಮಂತ್ರಿ ಯಾವಾಗ ಬರಬಹುದು? ಅಥವಾ ನಮ್ಮ-ನಿಮ್ಮಂತವರು ಸ್ವ ಪ್ರೇರಣೆಯಿಂದ ಬದಲಾಗುತ್ತಾ ಹೋದರೆ ಸಾಕೆ ಎನ್ನುವ ಪ್ರಶ್ನೆ ನನ್ನದು.

Tuesday, March 20, 2012

ನಾನು ನೋಡಿದ ಅಷ್ಟಾವಧಾನ ಕಾರ್ಯಕ್ರಮ

ಕ್ರಿಕೆಟ್ ಗೂ ಅವಧಾನಕ್ಕೂ ಏನು ಸಂಬಂಧ ?
ಕ್ರಿಕೆಟ್ ನಲ್ಲಿ ಒಬ್ಬ ಬ್ಯಾಟ್ಸ್ ಮನ್, ಒಬ್ಬ ಬೌಲರ್, ಹಲವಾರು ಜನ ಫೀಲ್ಡರ್ಸ್.  ಆದರೆ ಅವಧಾನದಲ್ಲಿ ಒಬ್ಬ ಬ್ಯಾಟ್ಸ್ ಮನ್,  ಉಳಿದವರೆಲ್ಲಾ, ಫೀಲ್ಡಿಂಗ್, ಬೌಲಿಂಗ್ ಒಟ್ಟಿಗೇ ಮಾಡ್ತಾರೆ.

ಹನುಮಾನ್ ಬೆಳೆದಂತೆ ಆತನ ಬಟ್ಟೆ, ಜುಟ್ಟು ಜನಿವಾರ ಬೆಳೆಯುತ್ತಿತ್ತೆ..?
ಅಯಸ್ಕಾಂತದ ಸಂಪರ್ಕಕ್ಕೆ ಬಂದ ಪಿನ್ನು, ಅಯಸ್ಕಾಂತವಾಗುವಂತೆ, ಹನುಮಾನ್ ಸಂಪರ್ಕದಿಂದ ಅವಕ್ಕೂ ಸಿಧ್ಧಿ ಬರುತ್ತದೆ.

ನೀರು ಜೀವನವಾದರೆ ನೀರೆ?
ಜೀವನವೆ?

ಬೆಂಗಳೂರಿನ ಬಳಿ ಇರುವ ಅಗ್ರಹಾರಕ್ಕೆ ಹೋಗಿದ್ದೀರಾ..?
ಅಲ್ಲಿಗೆ ಹೋಗಿ ಬರಲು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ.

ಗಣೇಶನಿಗೆ ಬೆನ್ನು ತುರಿಕೆಯಾದರೆ ಏನು ಮಾಡುತ್ತಾನೆ?
ಸೊಂಡಿಲು ಬೆನ್ನು ಮುಟ್ಟುವುದರಿಂದ ಸಮಸ್ಯೆ  ಇಲ್ಲ.  ನೆಗಡಿಯಾದರೆ ಮಾತ್ರ ಸಮಸ್ಯೆ.

ಇವು ಶುಕ್ರವಾರದ ಅಷ್ಟಾವಧಾನ ಕಾರ್ಯಕ್ರಮದಲ್ಲಿ ಕೇಳಿ ಬಂದ ಅಪ್ರಸ್ತುತ ಪ್ರಸಂಗದ ಪ್ರಶ್ನೋತ್ತರ.  ತೀಕ್ಷ್ಣ ಮತಿಯ ಉತ್ತರಗಳಿಂದ ರಂಜಿಸಿದವರು ಶತಾವಧಾನಿ ಅರ್. ಗಣೇಶ್. ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿ ಅಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೃಷ್ಟ  ನನ್ನದು.

ಶನಿವಾರ ಬೆಳಿಗ್ಗೆ ವಿನಯ ಫೋನ್ ಮಾಡಿ, ಸಾಯಂಕಾಲ ಅಷ್ಟಾವಧಾನ ಕಾರ್ಯಕ್ರಮಕ್ಕೆ ಬರುವಂತೆ ತಿಳಿಸಿ, ಅವನೂ ಬರುತ್ತೇನೆಂದು ಹೇಳಿದ. ಅದಕ್ಕೆ ನಾನು ವೈಟ್ ಫೀಲ್ಡ್ ನಿಂದ, ಇಂದಿರಾನಗರದವರೆಗೆ ಬಸ್ಸಿನಲ್ಲಿ ಬಂದು, ಅಲ್ಲಿಂದ ಬೈಕಿನಲ್ಲಿ ಮಲ್ಲೇಶ್ವರ ತಲುಪಿ, ಗಾಂಧಿ ಸಾಹಿತ್ಯ ಸಂಘವನ್ನು ಹುಡುಕಿ, ಕಾರ್ಯಕ್ರಮಕ್ಕೆ ಹೋದಾಗಾಗಲೇ ಅರ್ಧ ಗಂಟೆ ತಡವಾಗಿತ್ತು.  ಆದರೇನು, ಆ ರಸಾನುಭವದಲ್ಲಿ, ಪ್ರಯಾಣದ ಆಯಾಸವೆಲ್ಲ ಮಾಯವಾಗಿ ಹೋಯಿತು. ಕರೆ ಮಾಡಿ  ನಾನು ಮನೆ ಬಿಟ್ಟು ಹೊರಡುವಂತೆ ಮಾಡಿದ ವಿನಯನಿಗೆ ನನ್ನ ಅನಂತ ಧನ್ಯವಾದಗಳು.

ಇನ್ನು ಆಷ್ಟಾವಧಾನ ಕಾರ್ಯಕ್ರಮದ ಕಾವ್ಯ ತತ್ವ ರಸಾನುಭೂತಿಯಂತೂ ಸ್ವಾರಸ್ಯಕರ, ಅದನ್ನಿಲ್ಲಿ ಅಕ್ಷರಗಳಲ್ಲಿ ಬಂಧಿಸಿಡಲಾಗುವುದಸಾಧ್ಯ.  ಕೇವಲ ವರದಿಯಾಗಿ ಬರೆಯುವುದಷ್ಟೇ ಸಾಧ್ಯ.
ನಿಷೇಧಾಕ್ಷರ  ವಿಭಾಗದಲ್ಲಿ  ಕೇಳಿದ ಪ್ರಶ್ನೆ,   ಶಾರ್ದೂಲವಿಕ್ರೀಡಿತ ವೃತ್ತದಲ್ಲಿ  ಗಾಂಧೀಜಿ ಸಂಸ್ಕೃತ ಸಂಘದ ಉದ್ಘಾಟನೆಗೆ ಮಾಡಬಹುದಾದ ಭಾಷಣವನ್ನು ಸಂಸ್ಕೃತದಲ್ಲಿ ಹೇಳುವಂತೆ ಕೇಳಲಾಗಿತ್ತು.
ಚಿತ್ರ ಪದ್ಯ ವಿಭಾಗಕ್ಕೆ, ಅತಿ ವಿರಳವಾದ ಛತ್ರ ಪದ್ಯ  ಛಂದಸ್ಸಿನಲ್ಲಿ  ಪದ್ಯ ರಚನೆ.
ದತ್ತ ಪದಿಯಲ್ಲಿ ಸನ್, ಮೂನ್, ಮತ್ತಿನ್ನೆರಡು ಪದಗಳನ್ನು ಬಳಸಿ ಡಿ.ವಿ,ಜಿ ಯವರ ಸ್ತುತಿ ಪಂದ್ಯ ರಚನೆ ಮಾಡುವ ಸವಾಲು.
ಸಮಸ್ಯಾಪೂರಣದಲ್ಲಿ,  ಮೂಗಿಲಿಯಂ  ತಿವಿದರೂ ಸುಮ್ಮನಿರುವ ಗಣೇಶನನ್ನು ಬಿಡಿಸಬೇಕಿತ್ತು , ಕಾವ್ಯವಾಚನದಲ್ಲಿ, ಸೊಗಸಾದ ಗಾಯನ, ಲಕ್ಷೀಶ, ಕುಮಾರವ್ಯಾಸ, ರನ್ನ, ಪಂಪರ ಕಾವ್ಯಗಳಿಂದ.  ಅಶುಕವಿತೆ ವಿಭಾಗದಲ್ಲಿ ಸುಂದರ ಸನ್ನಿವೇಶಗಳು,  ಹರಿವ ನೀರಿನಲ್ಲಿ ಕಾಣುವ ಚಂದ್ರಬಿಂಬದ ಕುರಿತು ರಚಿಸಿದ ಕವಿತೆ, ಅತ್ಯಂತ ಸುಂದರ, ಕಾಲದ ಹರಿವಿನಲ್ಳೂ ಮಹಾತ್ಮರ ಚಂದ್ರಬಿಂಬ ಸ್ಥಿರವಾಗಿರುತ್ತದೆಯೆನ್ನುವ ಅಸಮಾನ್ಯ ಉಪಮೆ. ದೂರದ ಬೆಟ್ಟಕ್ಕೆ ಬಿದ್ದ ಬೆಂಕಿಯನ್ನು, ಗ್ರೀಕ್ ಕಾವ್ಯದ ಬೆಂಕಿಯ ಚರ್ಮದ ಟಗರು ಹೊತ್ತು ತರುವ ವೀರನಿಗೆ ಹೋಲಿಸಿದ ಕವಿತೆ.

ಒಟ್ಟಿನಲ್ಲಿ ಮೂರೂವರೆ ಗಂಟೆಗಳ ಸಮಯ ಸರಿದದ್ದೇ ತಿಳಿಯಲಿಲ್ಲ.  ಹಿಂತಿರುಗಿ ಮನೆಗೆ ಬರುವಾಗ ಮನಸ್ಸಿನ ತುಂಬಾ ರಸಾನುಭೂತಿ.

Tuesday, March 06, 2012

ಸುಳಿಯದ ಹಾದಿ


ಹಳದಿ ಕಾಡಿನಲೊಂದು ಕವಲೊಡೆದ ಹಾದಿ,
ಹೋಗಲಾಗದು ಎರಡರಲೂ ಒಂದೇ ಬಾರಿ
ಏನು ಮಾಡಲಿ ಒಂಟಿ ಪಯಣಿಗ
ನಿಂತು ನೋಡಿದೆ ಕಣ್ಣು ಹೋಗುವರೆಗೆ
ದಾರಿಯೊಂದು ಸುತ್ತಿಸುಳಿದು ಮರೆಯಾಗುವರೆಗೆ

ಮತ್ತೊಂದರೆಡೆ ಕಣ್ಣು ಹಾಯಿಸಿದರೆ ಅದೂ ಹಾಗೆ
ಹುಲ್ಲು ಬೆಳೆದ ಹಾದಿ; ಹೊಸತಂತೆ ಕಾಣುತಿದೆ.
ಮತ್ತೊಂದರದಕಿಂತ ಸ್ವಲ್ಪ ಒಳಿತಿರಬಹುದು
ಬಳಸಿದಾ ಜನಸಂಖ್ಯೆ ಕಡಿಮೆಯಿರಬಹುದು
ಕಣ್ಣೋಟಕೆರಡೂ ಕಾಣುವುದೂ ಒಂದೇ ಬಗೆ

ಆ ಬೆಳಗಿನಲ್ಲಿಂದು ಕವಲುಹಾದಿಗಳೆರಡು
ಒಂದರಂತೇ ಇನ್ನೊಂದು ಗುರಿ ಕಾಣದಿಹುದು.
ಮೊದಲಿನದು ಮತ್ತೊಂದು ದಿನಕಿರಲಿ ಎಂದೇ ಬಗೆದೆ
ಮತ್ತೊಂದು ದಾರಿಯಲಿ ನಡೆದೆ ಮುಂದೆ.
ಮತ್ತಲ್ಲಿಗೆ ಬಂದು ತಲುಪುವೆನೇ...? ಮುಂದೆ...?

ಕಾಲನುರುಳಿನಲಿ ಪಯಣ, ಮುಂದೇನೋ ಎಂತೋ..?
ನಿಟ್ಟುಸಿರನೊರೆದು ಮುಂದೊಮ್ಮೆ ನುಡಿವೆನೇ ಇಂತು..?
ಹಳದಿ ಕಾಡಿನ ಕವಲು ಹಾದಿಯಲಿ ನಾ ಹಿಡಿದ ಹಾದಿ
ಜೊತೆಗಾರರಿಲ್ಲದೆಯೇ ನಾ ತುಳಿದ ಹಾದಿ.
ಜನ ಬಳಸಿರದ ಹಾದಿ, ಎಲ್ಲ ಬದಲಾವಣೆಯ ಆದಿ.

ರಾಬರ್ಟ್ ಫ್ರಾಸ್ಟ್ ಕವಿಯ "The road not taken" ಕವಿತೆಯ ಭಾವಾನುವಾದ.