Pages

Thursday, February 25, 2010

ಊರುಗೋಲುಗಳು

ಒಂದೇ ಒಂದು ಹೆಜ್ಜೆ
ಇಡಲಿಲ್ಲ ನಾನು ಏಳು ವರುಷಗಳ ವರೆಗೆ
ಪ್ರಸಿದ್ದ ವೈದ್ಯರೊಬ್ಬರ ಕಂಡೆ ಈ ಬಗ್ಗೆ
ಕೇಳಿದರವರು 'ಈ ಊರುಗೋಲುಗಳು ನಿನಗೇಕೆ?'
ನುಡಿದೆ ನಾ 'ನಾನಲ್ಲವೆ ಕುಂಟ ಅದಕೆ'

ಮರುನುಡಿದ ಕೂಡಲೇ ವೈದ್ಯ 'ಆಶ್ಚರ್ಯವೇನದರಲ್ಲಿ
ಊರುಗೋಲುಗಳ ಕಿತ್ತತ್ತಲಿಡು ಪಕ್ಕದಲ್ಲಿ
ಕುಂಟಾದರೇನು ? ಹಾಗೆ ಕುಂಟುತಲೇ ನಡೆ
ನೆಲಕೆ ಬೀಳು, ಬಿದ್ದು ತೆವಳು ನಡೆಯಲಾಗದೆಡೆ"

ಕಿತ್ತುಕೊಂಡ ನನ್ನ ಪ್ರೀತಿಯ ಆಸರೆಗೋಲುಗಳ
ಹೇಳುತ್ತ ಹೀಗೆ, ನಗುತ್ತ ದೆವ್ವದ ನಗೆ !
ಮುರಿದನೆರಡೂ ಕೋಲುಗಳ ಬೆನ್ನ ಹಿಂದೆ
ಮುರಿದು ಒಲೆಗಿಟ್ಟ ನನ್ನ ಆಶೆಯನ್ನೇ

ಅರೆ,! ನಾನೀಗ ಗುಣವಾಗಿದ್ದೇನೆ .. ನಡೆಯಬಲ್ಲೆ
ಬರೆ ನಗೆಯ ಮದ್ದು .. ಇನ್ನೆಂಥದಲ್ಲೆ
ಆದರೂ ಒಮ್ಮೊಮ್ಮೆ ಕೋಲುಗಳ ಕಂಡಾಗ
ಕುಂಟುತ್ತಲಿರುತ್ತೇನೆ ಕೆಲವು ಘಳಿಗೆ.

(ಬರ್ಟೋಲ್ಟ್ ಬ್ರೆಕ್ಟ್ ನ "The cruches" ನ ಭಾವಾನುವಾದ)
೨೫/೫/೧೯೯೨

English version is here

THE CRUTCHES

Seven years I could not walk a step.
When I to the great physician came
He demanded: Why the crutches?
And I told him: I am lame.

He replied: That¹s not surprising.
Be so good and try once more.
If you¹re lame, it¹s those contraptions.
Fall then! Crawl across the floor!

And he took my lovely crutches
Laughing with a fiend¹s grimace
Broke them both across my back and
Threw them in the fireplace.

Well, I¹m cured now: I can walk.
Cured by nothing more than laughter.
Sometimes, though, when I see sticks
I walk worse for some hours after.

Wednesday, February 24, 2010

ಜಾದೂ ಪೆಟ್ಟಿಗೆಯ ನಿರೀಕ್ಷೆಯಲ್ಲಿ

ಜೀವದ ಮೇಲಿನ ಆಸೆ ಬಹು ದೊಡ್ಡದು. ಕೆಲಸಕ್ಕೆ ರಾಜೀನಾಮೆ ಇತ್ತು ಕುಟುಂಬದದೊಂದಿಗೆ ಕಾಲ ಕಳೆಯುವ ಬಯಕೆಯ ಯುವತಿ ಅದಕ್ಕಾಗಿ ಬದುಕುವ ಹಂಬಲ ಹೊತ್ತು ಕಿಟಕಿಗೆ ಸೀರೆ ಕಟ್ಟಿ ಕೆಳಗಿದಳು. ಆದರೆ ಕಾಲನ ಲೆಕ್ಕಾಚಾರವೇ ಬೇರೆ. ಅವಳನ್ನು ಸೀರೆಯಿಂದ ಬಿಡಿಸಿ ನೇರ ತನ್ನ ತೆಕ್ಕೆಗೆ ತೆಗೆದುಕೊಂಡ. ಬದುಕಬೇಕೆಂಬದ ಹಂಬಲದ ಹಲವರ ಸಾವು ಕಾರ್ಲ್ ಟನ್ ಕಟ್ಟಡದ ದುರಂತ. ಆಧುನಿಕತೆಯ ಹೆಸರಿನ ಆಮಿಷಗಳೂ , ಅವುಗಳ ಹಿಂದೆ ಅರಿಯದೆ ಕಾಲಿಡುವ ಅನಿಷ್ಟಗಳೂ ಈದುರಂತದ ಪಾಠ. ದುರಂತದ ಘಟನಾಸ್ಥಳಕ್ಕೆ ಕೇವಲ ಮೂರು ಅಗ್ನಿಶಾಮಕ ವಾಹನಗಳು ಸಮಯದಲ್ಲಿ ತಲುಪಲು ಸಾಧ್ಯವಾಯಿತು. ಇದು ಬೆಂಗಳೂರಿನ ಸಂಚಾರ ದಟ್ಟಣೆಯ ದುರಂತ. ಸಿನಿಮಾಗಳ ಪ್ರಭಾವದಿಂದಲೋ, ಅಥವಾ ಇನ್ನ್ಯಾವುದೋ ಭಂಡ ಧೈರ್ಯದಿಂದಲೋ ಮೇಲಿಂದ ಹಾರುವ ಸಾಹಸಕ್ಕಿಳಿದವರು ಜೀವ ತೆತ್ತದು ಮತ್ತೊಂದು ದುರಂತ. ಇದು ಬೆಂಗಳೂರಿನಲ್ಲಿ ಕೇವಲ ಹಣದಾಸೆಯಿಂದ ಸುರಕ್ಷತಾ ನಿಯಮಗಳನ್ನು ಮೀರಿ ಕಟ್ಟಡ ಕಟ್ಟುವವರ ಕಲ್ಲು ಮನಸ್ಸಿನ ನಿರ್ದರ್ಶನ. ಆಧುನಿಕತೆ ತನ್ನ ಅನುಕೂಲಗಳನ್ನು ತೋರಿಸುತ್ತಲೇ ತನ್ನ ಅನಿಷ್ಟಗಳ ತೆಕ್ಕೆಯಲ್ಲಿ ಎಲ್ಲರನ್ನೂ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುತ್ತದೆ ಎನ್ನುವುದಕ್ಕೊಂದು ಜೀವಂತ ನಿದರ್ಶನ.

ಇಂತಹ ಆಧುನಿಕತೆಗೆ ಭಾರತ ತೆರೆದುಕೊಳ್ಳಲಾರಂಭಿಸಿದ್ದು ತೊಂಬತ್ತರ ದಶಕದ ಪ್ರಾರಂಭದಲ್ಲಿ. ಅಂದು ನಾವು ವಿದ್ಯಾರ್ಥಿಗಳಾಗಿದ್ದಾಗ, ಡಂಕೆಲ್ ಒಪ್ಪಂದವನ್ನು ಉಗ್ರವಾಗಿ ವಿರೋಧಿಸಿದ ಪಕ್ಷಗಳು ಇಂದು ಬಂಡವಾಳಶಾಹಿಗಳ ಕೈಯಲ್ಲಿ ಸೂತ್ರದ ಗೊಂಬೆಗಳಾಗಿರುವುದು ಇತಿಹಾಸದ ಒಂದು ಐರನಿ. ಅಂದು ಈ ಒಪ್ಪಂದ ಜಾರಿಗೆ ಬರಲೆಂದು ಹೃದಯಪೂರ್ವಕವಾಗಿ ಹೋರಾಡಿದ ಹಲವರು ಬಂಡವಾಳ ಶಾಹಿಯ ವಿರುದ್ದ ಹೋರಾಡುವ ಮನಸ್ಸು ಮಾಡುತ್ತಿರುವುದೂ ಇಂತಹ ಐರನಿಯಿಂದಲೇ. ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ ಎಂಬ ಮಾತು ಎಷ್ಟು ಸತ್ಯ. ಮನಮೋಹನ ಸಿಂಗ್ - ನರಸಿಂಹರಾವ್ ಜೋಡಿಯಿಂದ ಆರಂಭವಾದ ಈ ಬದಲಾವಣೆಯ ಹಿಂದಿನ ಬೀಜ ಶಕ್ತಿ ರಾಜೀವ ಗಾಂಧಿಯವರ ಕನಸುಗಳು. ರಾಜೀವರ ಕಾಲದಲ್ಲಿ ಭಾರತ ಅಣುಶಕ್ತಿ, ತಂತಜ್ಞಾನ ವಿದ್ಯ್ತುತ್ ವಿಜ್ಞಾನ ಕ್ಷೇತ್ರಗಳಲ್ಲಿ ಬದಲಾವಣೆ ಕಂಡಿತು. ಅದರೊಂದಿಗೆ ಬಂಡವಾಳಶಾಹಿ ವ್ಯವಸ್ಥೆ ಅರ್ಥಿಕ ಬೆಳವಣಿಗೆಗೆ ಅಗತ್ಯ ಎಂಬ ಅರಿವು, ಅದು ನಿಜವೋ ಸುಳ್ಳೋ ಭಾರತೀಯರಿಗೆ ಮೂಡಿದ್ದಂತೂ ಸತ್ಯ. ಕೆಲವೇ ಹೈ- ಪ್ರೊಫೈಲ್ ಜನ ಹೇಳುತ್ತಿದ್ದ ಶೇರು ಮಾರುಕಟ್ಟೆ ಇಂದು ಮಧ್ಯಮ ವರ್ಗದ ಭಾರತೀಯರ ಮನೆ ಹೊಕ್ಕಿದೆ. ತಂತ್ರಜ್ಞಾನದ ಅರಿವು ಮತ್ತು ಅದರ ಸಾಧ್ಯತೆಗಳು ನಮ್ಮರಿವಿಗೇ ಬಾರದಂತೆ ನಮ್ಮಲ್ಲಿ ಸರ್ವವ್ಯಾಪಿಯಾಗಿದೆ. ಭಾರತದ ಕಡಲ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯುವ ಮುಂಚೆ ನಾಸಾ ಅಂತರ್ಜಾಲ ತಾಣದಲ್ಲಿ ಹವಾಮಾನ ವರದಿ ನೋಡುತ್ತಾರೆ. ಮೈಸೂರಿನ ಗಲ್ಲಿಯೊಂದರಲ್ಲಿ ವಾಸವಿರುವ ಕ್ರಿಕೆಟ್ ಬೆಟ್ಟಿ ಇಂಗ್ಲೆಂಡ್ ನಲ್ಲಿ ನಡೆಯುವ ಪಂದ್ಯದ ಹವಮಾನ ವರದಿಯನ್ನು ಅಂತರ್ಜಾಲದಲ್ಲಿ ನೋಡುತ್ತಾನೆ. ಮುಂಬೈ ಕುದುರೆ ಪಂದ್ಯಕ್ಕೆ ಕೇರಳದ ಪಾಲಕ್ಕಾಡಿನ ಜಮೀನುದಾರ ಕೊಯಮತ್ತೂರಿಗೆ ಬಂದು ಸೈಬರ್ ಕೆಫೆಯಲ್ಲಿ ಕುದುರೆಗಳ ಜಾತಕ ನೋಡುತ್ತಾನೆ. ನಾಸ್ಡಾಕ್ ನ ಶೇರು ಮಾರುಕಟ್ಟೆಯ ಬೆಳಗಿನ ಪ್ರಾರಂಭದ ಘಂಟೆಯನ್ನು ಮೈಸೂರಿನಲ್ಲಿ ನಾರಾಯಣ ಮೂರ್ತಿ ಹೊಡೆಯುತ್ತಾರೆ. ವಿಚಾರಣೆಗೆ ಮೈಸೂರಿನ ನ್ಯಾಯಾಲಯ, ನ್ಯೂಯಾರ್ಕಿನ ಪ್ರತಿವಾದಿಯನ್ನು ಟೆಲಿ ವಿಚಾರಣೆ ನಡೆಸುತ್ತದೆ. ಅಮೆರಿಕಾದ ಬೆಳಗಿನ ಕೆಲಸ ಇಲ್ಲಿನ ರಾತ್ರಿ ಪಾಳಿಯ ಕಾಲ್ ಸೆಂಟರ್ ನಲ್ಲಿ ನಡೆಯುತ್ತದೆ. ರಾತ್ರಿ ಮಾಡಬೇಕಾದ ಕೆಲಸ ಬೆಳಗಿನ ಪಾಳಿಯ ಔಟ್ ಸೋರ್ಸಿಂಗ್ ಕೇಂದ್ರದಲ್ಲಿ ನಡೆಯುತ್ತದೆ. ಪ್ರಪಂಚ ಗ್ಲೋಬಲ್-ವಿಲೇಜ್ ಆಗುತ್ತಿದೆ. ಇಂತಹ ಸಮಾಜದಲ್ಲಿ ನಮ್ಮ ಸರ್ಕಾರ ಅಭಿವೃದ್ದಿಯ ಅಧ್ಯಯನಕ್ಕಾಗಿ ಚೀನಾಕ್ಕೆ ಸಚಿವರನ್ನು ಪ್ರವಾಸ ಕಳಿಸುತ್ತದೆ. ಅದೂ ಅತಿವೃಷ್ಟಿಯಿಂದ ರಾಜ್ಯ ನರಳುತ್ತಿದ್ದಾಗ. ಬಂಡವಾಳ ಶಾಹಿ ಸರ್ಕಾರ ಕಮ್ಯುನಿಸ್ಟ್ ದೇಶವೊಂದಕ್ಕೆ ಅಭಿವೃದ್ದಿಯ ಅಧ್ಯಯನಕ್ಕೆ ಹೋಗುವುದು ಮತ್ತೊಂದು ಇತಿಹಾಸ. ಅಂದು ಸೋವಿಯತ್ ಒಕ್ಕೂಟದ ವ್ಯವಸ್ಥೆಯಿಂದ ಪ್ರೇರಿತರಾದ ನೆಹರೂರವರಂತೆ, ಇಂದು ಯಡಿಯೂರಪ್ಪನವರ ತಂಡ ಚೀನಾದಿಂದ ಪ್ರೇರಿತರಾಗುತ್ತಾರೆ. ಕರ್ನಾಟಕದ ಕಬ್ಬಿಣದ ಅದಿರನ್ನು ಮುಕ್ತವಾಗಿ ಚೀನಾಕ್ಕೆ ಮಾರುತ್ತಾರೆ. ಪರಿಸರ ಇಲಾಖೆ ,ಲೋಕಾಯುಕ್ತ ಇವರೆಲ್ಲರ ಮಾತು ಮೀರಿ, ಕರ್ನಾಟಕದಲ್ಲಿ ಇನ್ನಷ್ಟು ಜಾಗೆಗಳನ್ನು ಗಣಿಗಾರಿಕೆಗೆ ನೀಡುತ್ತಾರೆ. ಇವೆಲ್ಲಾ ಆಯಾ ಕಾಲಘಟ್ಟಗಳಲ್ಲಿ ನಡೆಯಲೇಬೇಕಾದ ಕೆಲಸಗಳೇನೋ? ಮುಂದಿನದ್ದು ಕಣ್ಣಿಗೆ ಬೀಳದಾದಾಗ ಇಂದಿನ ದಿನ ಕಳೆದರೆ ಸಾಕು ಎನ್ನುವ ಮನೋಭಾವ. ಯಥಾರಾಜಾ.. ತಥಾ ಪ್ರಜಾ.. ತಿನ್ನಲು ಅನ್ನ ನೀಡುವ ಭೂಮಿಯನ್ನು ಹಣಕಾಸಿಗೆ ಮಾರಿ, ಬಂದ ಹಣವನ್ನು ಮೂರೇ ತಿಂಗಳಲ್ಲಿ ಉಡಾಯಿಸಿ ಮತ್ತೆ ಕೂಲಿ ಕೆಲಸ ಹುಡುಕುತ್ತಾ, ಸಿಗದಿದ್ದಾಗ ಅಪರಾಧಗಳಿಗಿಳಿಯುವ ಜನಕ್ಕೆ ದಾರಿ ತೋರುವ ನಾಯಕರಿವರು. ನೈಸ್ ಭೂಮಿಗೆ ಹೋರಾಡಿದರೆ ಅಲ್ಲಿ ನಿಮ್ಮ ಜಮೀನೆಷ್ಟೆಕರೆ ಎನ್ನುತ್ತಾರೆ. ಖೇಣಿಯ ಹುಟ್ಟುಹಬ್ಬ ಅಭಿಮಾನದಿಂದ ನಡೆಯಿತೋ, ಹಣದ ಹೊಳೆ ಹೇಗೆ ಹರಿಯಿತೋ ಎನ್ನುವುದನ್ನು ಹುಡುಕುವವರೆಷ್ಟು ಮಂದಿ.

ಇದನ್ನೆಲ್ಲಾ ಹೇಳುವುದಕ್ಕೆ ಹೊರಟಿದ್ದು, ಈ ವಾರದ ವಿಶೇಷವೊಂದು ಇರುವುದರಿಂದ. ಇದು ಫೆಬ್ರುವರಿ ತಿಂಗಳ ಕಡೆಯ ವಾರ. ಈ ವಾರದ ಶನಿವಾರದಂದು ಸಂಸತ್ತಿನಲ್ಲೊಂದು ಮಾಯಾಪೆಟ್ಟಿಗೆ ಬಿಚ್ಚಿಕೊಳ್ಳುತ್ತದೆ. ಅದರಿಂದ ಭರವಸೆಗಳ ಹೂ ಮಳೆ ಹರಿಯುತ್ತದೆ. ತೆರಿಗೆ ಭಾರದ ಹೊರೆಯ ಮೊಳೆಯೂ ಹೊಳೆಯುತ್ತದೆ. ಅದೇ ನಮ್ಮ ಬಜೆಟ್. ಪ್ರಣವ ಮುಖರ್ಜಿ ಎಂಬ ಮಾಂತ್ರಿಕನ ಕೈಯಲ್ಲಿ ಈ ಪೆಟ್ಟಿಗೆ. ನಮ್ಮ ಬಜೆಟ್ ನ ನಿರೀಕ್ಷೆಯ ಮುಂಚೆ ನಿಮಗೊಂದು ಸಣ್ಣ ಕತೆ ಹೇಳುತ್ತೇನೆ. ಅಮೆರಿಕಾದ ಮೂಲ ನಿವಾಸಿ ರೆಡ್-ಇಂಡಿಯನ್ನ್ ಬುಡಕಟ್ಟು ಜನಾಂಗಕ್ಕೆ ಒಂದು ಅಭ್ಯಾಸವಿದೆಯಂತೆ . ಅವರಿಗೆ ಹೇಗೋ ತಮ್ಮದೇ ಆದ ವಿಧಾನಗಳ ಮೂಲಕ ಆ ವರ್ಷ ಮಳೆಯಾಗುವ ಪ್ರಮಾಣ ಎಷ್ಟೆಂಬುದು ಅವರ ನಾಯಕನ ಮೂಲಕ ತಿಳಿಯುತ್ತದಂತೆ. ಕಣಿ ಕೇಳಿಯೋ, ಆಕಾಶ ನೋಡಿಯೋ, ಅಶರೀರವಾಣಿಯೋ ಅವನಿಗೆ ಈ ರಹಸ್ಯ ಬಯಲು ಮಾಡುತ್ತದಂತೆ. ಅದು ಹೇಗೆ ತಿಳಿದುಕೊಳ್ಳಬೇಕೆಂಬುದು ಅವರ ನಾಯಕರಿಗೆ ಮಾತ್ರ ಗೊತ್ತಿರುವ ಗುಟ್ಟು. ಅದನ್ನು ವಂಶಪಾರಂಪರ್ಯವಾಗಿ ತಮ್ಮ ವಾರಸುದಾರರಿಗೆ ಸಮಯ ಬಂದಾಗ ತಿಳಿಸುವ ಪದ್ದತಿ ಅವರದ್ದು. ನಾಯಕನ ಮಾತಿನಂತೆ ಮಳೆ ಹೆಚ್ಚಾಗಿ ಬರುತ್ತದೆ ಎಂದರೆ ಸುತ್ತಲಿನ ಕಾಡುಗಳಿಂದ ಮರವನ್ನು ಹೆಚ್ಚಾಗಿ ಸಂಗ್ರಹಿಸುತ್ತಾರೆ. ಧೀರ್ಘ ಮಳೆಗಾಲಕ್ಕೆ ಹೆಚ್ಚಿನ ಮರ ಸಂಗ್ರಹಿಸಿ ಸರಿದೂಗಿಸಿಕೊಳ್ಳಬೇಕೆಂಬುದು ಅವರ ತಂತ್ರ.

ಅಂತಹ ಒಬ್ಬ ನಾಯಕನ ವಾರಸುದಾರನಾಗಬೇಕಿದ್ದ ಪುತ್ರನೊಬ್ಬ ನಗರಕ್ಕೆ ಹೋಗಿ ಹೆಚ್ಚಿನ ವಿದ್ಯೆ ಕಲಿತು ಬಂದನಂತೆ. ವಿದ್ಯೆ ಕಲಿತು ಬಂದ ಮಗನಿಗೆ ಮರಣಶಯ್ಯೆಯೊದಗಿದಾಗ ನಾಯಕ ಹತ್ತಿರ ಕರೆದು ಮಳೆಯ ಮುನ್ಸೂಚನೆ ತಿಳಿಯುವ ವಿದ್ಯೆ ತಿಳಿ, ಇನ್ನು ಮುಂದೆ ಅವನೇ ತನ್ನ ಜನಾಂಗಕ್ಕೆ ಮಾರ್ಗದರ್ಶನ ಮಾಡಬೇಕೆಂದು ಹೇಳಿ ಮರಣಿಸುತ್ತಾನೆಸಿ ನಾಯಕ. ವಿದ್ಯೆ ಕಲಿತ ಹೊಸನಾಯಕನಿಗೆ ತಂದೆ ಹೇಳಿದ ಮಾತು ಅಪಥ್ಯ. ಅವೈಜ್ಞಾನಿಕವಾಗಿ ಮಳೆ ಬೀಳುವುದನ್ನು ನಿರ್ಧರಿಸುವುದು ಸರಿಯಲ್ಲವೆಂದು ಅವನ ಭಾವನೆ. ಮಳೆ ಬೀಳುವ ಪ್ರಮಾಣ ತಿಳಿಸಲು ದೊಡ್ಡದೊಂದು ಇಲಾಖೆಯೇ ಇದೆ. ಅಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಾರೆ. ಸಹಸ್ರಸಹಸ್ರ ಸಂಖ್ಯೆಯ ಗಣಕಗಳಿವೆ. ಪುಟಗಟ್ಟಲೇ ಉದ್ದದ ಸೂತ್ರಗಳಿವೆ, ಕಿಲೋಬೈಟುಗಟ್ಟಲೇ ಪ್ರೋಗ್ರಾಮುಗಳಿವೆ. ಅವನ್ನು ಬಿಟ್ಟು ತಂದೆ ಹೇಳಿದ ವಿಧಾನ ಸರಿ ಎಂದು ಅವನ ಮನಸ್ಸೊಪ್ಪಲಿಲ್ಲ. ಏನೇ ಆಗಲಿ ವೈಜ್ಞಾನಿಕ ಮಾರ್ಗದರ್ಶನ ಮಾಡಬೇಕೆಂದು ನಿರ್ಧರಿಸಿದ ಅವನು ಹವಾಮಾನ ವರದಿಯನ್ನು ರೇಡಿಯೋನಲ್ಲಿ ಕೇಳಿದ, ಅಂತರ್ಜಾಲದಲ್ಲಿ ಓದಿದ. ಸಾಧಾರಣ ಮಳೆಯ ಸೂಚನೆಗಳಿವೆ ಎಂದು ತನ್ನ ಜನಗಳಿಗೆ ತಿಳಿಸಿದ. ಜನ ಮರ ಸಂಗ್ರಹಿಸಲು ಮೊದಲಿಟ್ಟರು, ಹವಾಮಾನ ವರದಿ ಬದಲಾಯಿತು. ಹೆಚ್ಚಿನ ಮಳೆ ಎಂಬ ವರದಿ ಕೇಳಿಸಿತು. ಅದನ್ನು ತನ್ನ ಜನಕ್ಕೆ ಹೇಳಿದೆ. ಅವರು ಇನ್ನೂ ಹೆಚ್ಚಿನ ಮರ ಕಡಿಯತೊಡಗಿದರು. ಆ ವಾರದ ವರದಿ ಇನ್ನಷ್ಟು ತೀಕ್ಷ್ಣ ವಾಗಿತ್ತು. ಧಾರಾಕಾರ ಮಳೆ ಎಂಬ ವರದಿ. ಅದನ್ನೇ ತನ್ನ ಜನಕ್ಕೆ ಹೇಳಿದ. ಅವರು ಇನ್ನೂ ಹೆಚ್ಚಿನ ಮರ ಸಂಗ್ರಹಣೆಗೆ ತೊಡಗಿದರು. ಮುಂದಿನ ವಾರದ ವರದಿ ಅತ್ಯುಗ್ರ ಮಳೆ ಬೀಳುವ ಸಾಧ್ಯತೆ ಎನ್ನುತ್ತಿತ್ತು. ಈಗ ಈ ನಾಯಕನಿಗೆ ಯೋಚನೆ ಹತ್ತಿತ್ತು. ಯಾವುದಕ್ಕೂ ಹವಮಾನ ಇಲಾಖೆಯವರು ಈ ವರದಿ ಹೇಗೆ ಸಂಗ್ರಹಿಸುತ್ತಾರೆ ತಿಳಿಯಬೇಕೆಂದು, ಹವಮಾನ ಇಲಾಖೆಯ ಕಾರ್ಯಾಲಯಕ್ಕೆ ಹೋದ. ಅಲ್ಲಿ ತನ್ನ ಭೂಪ್ರದೇಶದ ಮಳೆಯ ವರದಿಯ ಬಗ್ಗೆ ವಿಚಾರಿಸಿದ. ಈ ಬಾರಿ ಅತ್ಯುಗ್ರ ಮಳೆ ಎನ್ನುವ ವರದಿ ಅವನಿಗೆ ಮತ್ತೆ ಸಿಕ್ಕಿತು. ಅವನು ಕೇಳಿದ ರೇಡಿಯೋ /ಅಂತರ್ಜಾಲದ ವರದಿ ಈ ವರದಿಯ ಆಧಾರದ ಮೇಲೇ ಇದ್ದಿತು. ಹಾಗಿದ್ದರೆ ಈ ವರದಿ ತಯಾರಾದದ್ದು ಹೇಗೆ. ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಿ , ಈ ವರದಿಯ ಆಧಾರದ ಬಗ್ಗೆ ವಿಚಾರಿಸಿದೆ. ಮುಖ್ಯಸ್ಥರ ಮಾತು ಆತನನ್ನು ಬೆಚ್ಚಿ ಬೀಳಿಸಿತು.

ಅವರು ಹೇಳಿದ್ದು .. " ನಾವು ಇಷ್ಟೆಲ್ಲಾ ಸಾಧನೆ-ಸಾಧನಗಳಿದ್ದರೂ ಪ್ರಕೃತಿಯ ಮುಂದೆ ಅಲ್ಪರು. ನಮ್ಮ ಲೆಕ್ಕಾಚಾರ ಹಲವಾರು ಬಾರಿ ಏರು-ಪೇರಾಗುತ್ತದೆ. ಆದರೆ ನಿಮ್ಮ ಭೂ ಪ್ರದೇಶದ ವಿಷಯದಲ್ಲಿ ನಾವು ಬೇರೆಯದೇ ಆದ ಲೆಕ್ಕಾಚಾರ ಅನುಸರಿಸುತ್ತೇವೆ. ಆ ಪ್ರದೇಶದ ಮೂಲವಾಸಿಗಳಾದ ರೆಡ್-ಇಂಡಿಯನ್ನರು ಮಳೆ ಹೆಚ್ಚಾಗಿ ಬೀಳುವ ವರ್ಷಗಳಲ್ಲಿ ಹೆಚ್ಚಿನ ಮರ ಸಂಗ್ರಹಿಸುತ್ತಾರೆ. ಈ ಬಾರಿಯಂತೂ ಅವರು ಅತ್ಯಂತ ಹೆಚ್ಚಿನ ಮರ ಸಂಗ್ರಹಿಸುತ್ತಿದ್ದಾರೆ ಅವರ ಲೆಕ್ಕಾಚಾರ ಇಷ್ಟೂ ವರ್ಷಗಳಲ್ಲಿ ತಪ್ಪಿದ್ದಿಲ್ಲ. ಅಂದರೆ ಈ ಬಾರಿ ಅತ್ಯುಗ್ರ ಮಳೆ ಬೀಳುತ್ತದೆ ಎನ್ನುವುದೇ ನಮ್ಮ ಅನಿಸಿಕೆ"

ಹೀಗೆ ನಮ್ಮ ಸುತ್ತಲಿನ ವೈಜ್ಞಾನಿಕ ವೆನ್ನಿಸುವ ಎಷ್ಟೋ ವರದಿಗಳು, ಅಸಂಬದ್ದ ತಳಹದಿಯ ಮೇಲೆ ನಿಂತಿರುತ್ತವೆ. ಈ ಬಾರಿಯ ಅರ್ಥಿಕ ಮುಗ್ಗಟ್ಟಿಗೆ ರಿಯಲ್ ಎಸ್ಟೇಟ್ ಉದ್ಯಮ ಕಾರಣ ಎನ್ನುವರಾರು, ನಾಗಾಲೋಟ ಓಡುತ್ತಿದ್ದಾಗ ಎಲ್ಲಿಯೋ ಏನೋ ತಪ್ಪಿರಬಹುದೇ ಎನ್ನುವ ಯೋಚನೆ ಮಾಡುವುದಿಲ್ಲ. ಇಂತಹ ವರದಿಗಳನ್ನು ಆಧರಿಸಿಯೇ ನಮ್ಮ ಬಜೆಟ್ ನಿರ್ಧರಿತವಾಗುತ್ತದೆ. ಪ್ರಣವ್ ಮುಖರ್ಜಿ ಸಮಾಜವಾದಿ ಗರಡಿಯಲ್ಲಿ ಬೆಳೆದವರು. ಆದರೂ ಇಂದಿಗೂ ಪ್ರಸ್ತುತವೆನಿಸುವ ರಾಜಕಾರಣಿ. ಹೊಸಸರ್ಕಾರದಲ್ಲಿ ಹಣಕಾಸು ಸಚಿವ ಸ್ಥಾನ ಚಿದಂಬರಂ ಅವರ್ನ್ನು ಬಿಟ್ಟು ಪ್ರಣವ್ ಮುಖರ್ಜಿಯವರತ್ತ ಹೋದಾಗ, ನನಗನ್ನಿಸಿದ್ದು ಭಾರತ ಈ ಬಂಡವಾಳಶಾಹಿಯ ಕಬಂಧ ಬಾಹುಗಳಿಂದ ಬಿಡಿಸಿಕೊಂಡು ಮತ್ತೆ ಸಮಾಜವಾದದ ನೆರಳಡಿಗೆ ತೆರಳುತ್ತಿದೆಯೇ ಎಂದು. ಅವರ ಮೊದಲ ಬಜೆಟ್ ಹೊಸತನವಿಲ್ಲದಿದ್ದರೂ, ಹೊರೆತನವೂ ಇರಲಿಲ್ಲ. ಅಲ್ಲದೆ ಅರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಬಂಡವಾಳಶಾಹಿಗಳಿಗೆ ಒಂದಿಷ್ಟು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದ್ದು ಸತ್ಯ. ಈ ಬಂಡವಾಳಶಾಹಿಗಳ ಬಾಹು ಬಂಧನ ಎಷ್ಟು ಬಿಗಿಯೆಂದರೆ, ಎಂದೂ ಬಂಡವಾಳಶಾಹಿಯ ತತ್ವದ ಮೇಲೇ ಸ್ಥಾಪಿತವಾದ ಅಮೆರಿಕೆಯಂತಹ ಪ್ರಜಾಪ್ರಭುತ್ವದ ನಾಯಕರು ಸಮಾನ ಅರ್ಥಿಕ ಲಾಭ ಎನ್ನುವ ಪದ ಬಳಸಿದ್ದಷ್ಟಕ್ಕೇ, ಉದ್ದುದ್ದದ ಚಾಟಿಗಳು ಬೀಸಲ್ಪಡುತ್ತವೆ. "you cannot multiply wealth by dividing it" ಎನ್ನುವ ಮಾತುಗಳನ್ನು ಜನಪ್ರಿಯಗೊಳಿಸುವ ಕ್ಕ್ಯಾಂಪೇನ್ (ಪ್ರಚಾರ ಸರಣಿ)ಗಳೇ ಆರಂಭವಾಗುತ್ತದೆ. ಬರಾಕ್ ಒಬಾಮ ಒಬ್ಬ ಸಮಾಜವಾದಿ - ಕಮ್ಯುನಿಸ್ಟ್ ಎನ್ನುವ ಹಣೆಪಟ್ಟಿಯನ್ನೂ, ಹೊಡೆದುಬಿಡುತ್ತವೆ. ಅದೂ ಒಬಾಮ ಸಮಾನ ಅರ್ಥಿಕತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮಾತ್ರ ಎನ್ನುವ ಭರವಸೆಯನ್ನು ಕೊಟ್ಟ ಮೇಲೆಯೂ.
ಇಂತಹ ಬಾಹುಗಳಿಂದ ಬಿಡಿಸಿಕೊಳ್ಳುವ ಶಕ್ತಿ ಪ್ರಣವ್ ಮುಖರ್ಜಿಯವರಿಗಿದೆಯೇ?

ಇದೆಯೆಂದೇ ಮನಮೋಹನ ಸಿಂಗ್ ನಂಬಿದ್ದಾರೆ. ಅದಕ್ಕಾಗಿಯೇ ಈ ಬಾರಿಯ ಬಜೆಟ್ ಅನ್ನು ನಾವು ಉತ್ಸುಕತೆಯಿಂದ ಎದುರು ನೋಡಬೇಕಿದೆ. ಸಿರಿವಂತರು ಮತ್ತು ಬಡವರ ನಡುವಿನ ಕಂದಕ ದೊಡ್ಡದಾಗುತ್ತಿದೆ. ಹಿರಿಯರು ಬದಲಾದ ವಾತಾವರಣದಲ್ಲಿ ಬಿಕ್ಕುತ್ತಿದ್ದಾರೆ. ಕಿರಿಯರು ಸ್ವಚ್ಚಂದವಾಗುತ್ತಾ, ಒಮ್ಮೆ ಎದುರಾಗುವ ಕಷ್ಟಕ್ಕೇ ಬರಿದಾಗಿ, ಬಲಿಯಾಗುತ್ತಿದ್ದಾರೆ. ಮೊದಲೇ ಹೇಳಿದಂತೆ ಆಧುನಿಕತೆಯ ಅನಿಷ್ಟಗಳು ಬಾಗಿಲ ಒಳಗೆ ಹೆಜ್ಜೆಯಿಟ್ಟಾಗಿದೆ. ಇವೆಲ್ಲವನ್ನು ಗಮನಿಸಿ ಹೆಚ್ಚರಿಕೆಯ ಹೆಜ್ಜೆಯಿಡುವ ಸವಾಲು ಪ್ರಣವ್ ಮುಖರ್ಜಿಯವರ ಮುಂದಿದೆ. ಅವರೇನು ಮಾಡುತ್ತಾರೆ? ತಮ್ಮ ಮಂತ್ರದಂಡವನ್ನಾಡಿಸಿ ಜಾದೂ ಪೆಟ್ಟಿಗೆಯನ್ನು ತೆರೆಯಲಿದ್ದಾರೆ. ಇದೇ ೨೬ರಂದು... ಅಲ್ಲಿಯವರೆಗೆ ಕಾದು ನೋಡೋಣ.

ಕೊನೆಯ ಮಾತು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೆ ಅನಾವೃಷ್ಟಿ. ಜನತಾ ಸರ್ಕಾರ ಇದ್ದರೆ ಅತಿವೃಷ್ಟಿ. .. ಈಗ ಬಿಜೆಪಿ ಸರ್ಕಾರದಲ್ಲಿ ಎರಡೂನಾ..? (ಈ ತಿಂಗಳ ಬಿಸಿಲು ನೋಡಿ ಅನಿಸಿದ ಮಾತು..ಸುಮ್ಮನೆ ನಕ್ಕುಬಿಡಿ)

Wednesday, February 17, 2010

Magic of thinking BIG --ಮಾಯೆ ಮಾಡುವ ಚಿಂತನೆ

ಹೀಗೆ ಸುಮ್ಮನೆ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದಾಗ, ಡೇವಿಡ್ ಜೆ ಶ್ವಾರ್ಜ್ ಬರೆದ "Magic of thinking big" ಪುಸ್ತಕದ ಕಣ್ಣಿಗೆ ಬಿದ್ದಿತು. ಇಂಗ್ಲಿಷಿನಲ್ಲಿ ಪರ್ಸನಾಲಿಟಿ ಡೆವಲಪ್ ಮೆಂಟ್ ಬಗ್ಗೆ ಸಹಸ್ರ ಸಹಸ್ರ ಪುಸ್ತಕಗಳು ಸಿಗುತ್ತವೆ, ಕನ್ನಡದಲ್ಲಿ ಇಂತಹ ಪುಸ್ತಕಗಳು ಬಹಳ ಕಡಿಮೆ. ಯಂಡಮೂರಿಯವರ ವಿಜಯಕ್ಕೆ ಐದು ಮೆಟ್ಟಿಲುಗಳು ಅಥವಾ ಶಿವ್ ಖೇರಾ ಅವರ "ನೀವೂ ಗೆಲ್ಲಬಲ್ಲಿರಿ" ಪುಸ್ತಕಗಳ ಅನುವಾದ ಬಿಟ್ಟರೆ ಅಂತಹ ಪ್ರಯತ್ನ ಬಂದಿದ್ದು ರವಿ ಬೆಳಗೆರೆ ಅವರಿಂದ.

ಆದರೆ ಕನ್ನಡ ಕಾದಂಬರಿಗಳಲ್ಲಿ ತರಾಸು ಚಿತ್ರಿಸುವ ವ್ಯಕ್ತಿ ಚಿತ್ರಗಳಿಂದ ಪರ್ಸನಾಲಿಟಿ ಡೆವಲಪ್ ಮೆಂಟ್ ಕಲಿಯುವುದಾದರೆ ಅದರ ಸೊಬಗೇ ಬೇರೆ. ಪೂಚಂತೆ ಸೃಷ್ಟಿಸಿದ ಜುಗಾರಿ ಕ್ರಾಸ್ ನ ಸುರೇಶನ ವ್ಯಕ್ತಿತ್ವವಾಗಲೀ ,ಕುವೆಂಪುರವರ ರಕ್ತಾಕ್ಷಿಯ ಬಸವಣ್ಣನಾಗಲಿ, ಬಿ ಎಂ ಶ್ರೀಯವರ ಅಶ್ವಥಾಮನ್ ಆಗಲೀ ಅದ್ವಿತೀಯರಷ್ಟೇ. ಈ ಸಂಚಿಕೆಯಲ್ಲಿ ನಾ ಹೇಳಬೇಕೆಂದಿರುವುದು ಈ ಪುಸ್ತಕದ ಬಗ್ಗೆ ಮಾತ್ರ. ಯೋಗವೂ ಯೋಗ್ಯತೆಯೂ ಕೈಗೂಡಿ ಬಂದರೆ ಇನ್ನಷ್ಟು ಹೇಳಬಹುದೇನೋ

"ಮಾಯೆ ಮಾಡುವ ಚಿಂತನೆ" Magic of thinking big ನಮ್ಮ ಚಿಂತನೆಗಳು ಇರಬೇಕಾದ ರೀತಿಯನ್ನು ಹೇಳಿಕೊಡುವ ಪ್ರಯತ್ನ ಮಾಡುತ್ತದೆ. ನಮ್ಮ ಚಿಂತನೆಗಳು ಹಿರಿಯವಾದಷ್ಟೂ ನಮ್ಮ ಸಾಧನೆ ದೊಡ್ಡದಾಗುತ್ತದೆನ್ನುವುದು ಈ ಪುಸ್ತಕದ ಸಾರಾಂಶ.

ನಂಬಿಕೆಯಿಂದ ಪರ್ವತವೇ ಚಲಿಸಬಲ್ಲುದು ಎನ್ನುತ್ತಾನೆ ಬೈಬಲ್ಲಿನ ಡೇವಿಡ್. ಇಂತಹ ನಂಬಿಕೆ ಬೆಳೆಸಿಕೊಳ್ಳಲು ನಮ್ಮ ಚಿಂತನೆಗಳೂ, ಯೋಚನೆಗಳೂ, ಯೋಜನೆಗಳೂ ಹೇಗಿರಬೇಕೆಂದು ತಿಳಿಸಿಕೊಡುವ ಒಂದು ಸುಂದರ ಪುಸ್ತಕ ಇದು. ನಾನಿಲ್ಲಿ ಇದರಲ್ಲಿನ ಕೆಲವು ಅಂಶಗಳನ್ನು ಹಿಡಿದುಕೊಡಲು ಯತ್ನಿಸಿದ್ದೇನೆ. ನಿಮಗೆ ಅವು ಸರಿ ಎನಿಸಿದರೆ ಆ ಪುಸ್ತಕವನ್ನು ಓದಿ ನೋಡಿ. ಕನ್ನಡದಲ್ಲಿ ಸದ್ಯಕ್ಕೆ ಈ ಪುಸ್ತಕ ದೊರಕುವುದೇ ಎನ್ನುವ ಮಾಹಿತಿ ಇಲ್ಲ.

ಡೇವಿಡ್ ಶ್ವಾರ್ಝ್ ಹೇಳುವ ಮೊದಲ ಅಂಶ
೧. ಕಾರ್ಯ-ಭಯವನ್ನು ನೀಗುತ್ತದೆ.
ಏನಾದರೂ ಮಾಡಲು ಭಯವಿದ್ದಲ್ಲಿ, ಆ ಕೆಲಸ ಮಾಡಲು ಪ್ರಾರಂಭಿಸಿ . ನಿಮ್ಮ ಭಯ ತಂತಾನೇ ಮಾಯವಾಗುತ್ತದೆ. ಈಜು ಬರದವನು, ಈಜಲು ಶುರುಮಾಡಿದರೆ ಅವನ ನೀರಿನ ಭಯ ನೀಗುತ್ತದೆ.
೨. ನೆನಪಿನ ಬ್ಯಾಂಕಿನಲ್ಲಿ ಮಧುರ ಯೋಚನೆಗಳಿರಲಿ.
ಮನಸ್ಸಿಗೆ ದುಃಖ ಕೊಡುವ ವಿಷಯಗಳನ್ನು ಆದಷ್ಟು ಮರೆತು ಬಿಡಬೇಕು. ಧನಾತ್ಮಕ ಮತ್ತು ಮುದ ನೀಡುವ ನೆನಪುಗಳು ಇನ್ನಷ್ಟು ಕಾರ್ಯ ಮಾಡಲು ಪ್ರೋತ್ಸಾಹಿಸುತ್ತವೆ . ಅದೇ ನೋವಿನ ವಿಷಯಗಳು ನಮ್ಮ ಉತ್ಸಾಹವನ್ನು ಕುಂದಿಸುತ್ತವೆ.
೩. ನಿಮ್ಮ ದೃಷ್ಟಿಕೋನ ಜನರಿಗನುಗುಣವಾಗಿರಲಿ.
ಎಲ್ಲರೂ ನಿಮ್ಮಂತೆಯೇ, ಆದರೆ ಅವರ ವಿಚಾರಧಾರೆಗಳು, ಅರ್ಥ ಮಾಡಿಕೊಳ್ಳುವ ಶಕ್ತಿಯೂ ಬೇರೆ ಬೇರೆ. ನಾವು ಆಡಿದ ಮಾತನ್ನು ಇತರರು ಅರ್ಥ ಮಾಡಿಕೊಳ್ಳುವಲ್ಲಿ ತಪ್ಪಿರಬಹುದು. ಅಥವಾ ಅವರ ನಿಲುವನ್ನು ನಾವು ಅರ್ಥ ಮಾಡಿಕೊಂಡಿಲ್ಲದಿರಬಹುದು. ಅವರ ದೃಷ್ಠಿಕೋನ ದ ಆಯಾಮಗಳೇ ಬೇರೆ ಇರಬಹುದು. ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ಸುತ್ತಲಿನ ಜನರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಮತ್ತು ನಿಮ್ಮ ಮಾತು ಅವರಿಗೆ ಸರಿಯಾಗಿ ಅರ್ಥವಾಗಿದೆಯೇ ಎಂದು ವಿಚಾರಿಸಿ.
೪. ನಿಮ್ಮ ಆತ್ಮಸಾಕ್ಷ್ಹಿ ಸರಿ ಎಂದು ಹೇಳುವುದನ್ನೇ ಮಾಡಲು ಶುರು ಮಾಡಿರಿ. ಒಮ್ಮೆ ನಿಮಗೆ ಇದು ಅಭ್ಯಾಸವಾಯಿತೆಂದರೆ ನೀವು ಮುಂದೆ ಯಾರ ಮುಂದೂ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿಲ್ಲ. ತತ್ ಕ್ಷ್ಹಣದ ಅನಾನುಕೂಲಗಳು ಇದರಿಂದ ಕಂಡರೂ, ದೀರ್ಘಕಾಲೀನ ಪರಿಣಾಮಗಳು ನಿಮ್ಮ ಆತ್ಮಸಾಕ್ಷ್ಹಿಗೆ ಧಕ್ಕೆಯನ್ನುಂಟು ಮಾಡುವುದಿಲ್ಲ.
೫. ನಿಮ್ಮ ನಡೆ,ನುಡಿ,ನೋಟಗಳಲ್ಲಿ ಆತ್ಮವಿಶ್ವಾಸ ತುಂಬಿರಲಿ. ನೀವು ಧರಿಸಿದ ಬಟ್ಟೆ, ನೀವು ನೋಡುವ ನೋಟ, ನಿಮ್ಮ ಮಾತು , ನಿಮ್ಮ ನಡಿಗೆ ಮತ್ತು ನೀವು ಮಾಡುವ ಎಲ್ಲ ಕೆಲಸಗಳಲ್ಲೂ ಆತ್ಮವಿಶ್ವಾಸವಿರಲಿ. ನಾನು ಮಾಡಬಲ್ಲೆ ಎಂಬ ನಂಬಿಕೆ ನಿಮಗಿದ್ದರೆ ನಿಮಗೆ ಖಂಡಿತವಾಗಿಯೂ ಅದನ್ನು ಸಾಧಿಸಲು ಸಾಧ್ಯ.


ಕೆಲವು ಸಣ್ಣ ಸಂಗತಿಗಳು ನಿಮ್ಮ ನಿಮಗೆ ಈ ಗುಣಗಳನ್ನು ತಂದುಕೊಡಬಲ್ಲುವು.
ಅ. ಮುಂದಿನ ಕುರ್ಚಿಯಲ್ಲೇ ಕೂಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಆ. ಮಾತಾಡುವಾಗ ಕಣ್ಣೋಟ ಕೂಡಿಸಿ.
ಇ. ಉಳಿದವರಿಗಿಂತ ಶೇ.೨೫ ರಷ್ಟು ವೇಗವಾಗಿ ನಡೆಯಿರಿ.
ಈ. ಮಾತಾಡಿ.
ಉ. ನಗುನಗುತ್ತಿರಿ.

ಇವನ್ನು ನೀವು ಅಭ್ಯಾಸ ಮಾಡುತ್ತಿದ್ದರೆ ನಿಮಗೆ ಅವು ಉಳಿದ ಗುಣಗಳು ನಿಮ್ಮಲ್ಲಿ ತುಂಬಲು ದಾರಿ ಮಾಡುತ್ತವೆ.


ಹಿರಿದಾಗಿ ಯೋಚಿಸುವುದು ನೀವು ಅನುಸರಿಸಬೇಕಾದ ಅತೀ ಮುಖ್ಯ ಗುಣ. ಅದಕ್ಕೆ ನೀವು
೧. ನಿಮ್ಮನ್ನು ನೀವೇ ಕೀಳರಿಮೆಯಿಂದ ಕಾಣಬೇಡಿ.
೨. ಹಿರಿಯ ಚಿಂತಕರು/ವ್ಯಕ್ತಿಗಳು ಬಳಸುವ ಶಬ್ದಗಳನ್ನೇ ಬಳಸಲು ಪ್ರಯತ್ನ ಪಡಿ
೩. ನಿಮ್ಮ ಕಾಣ್ಕೆಯನ್ನೂ / ದರ್ಶನವನ್ನೂ ಹಿಗ್ಗಿಸಿಕೊಳ್ಳಿ. ದೂರದವರೆಗೆ ಆಲೋಚಿಸಲು ಪ್ರಯತ್ನಿಸಿ.
೪. ನೀವು ಮಾಡುತ್ತಿರುವ ಕೆಲಸದ ಹಿರಿದಾದ ಚಿತ್ರಣವನ್ನು ತಂದುಕೊಳ್ಳಿ. (ದೇಗುಲ ಕಟ್ಟುವ ಕೂಲಿಗಳ ಕತೆ ನೆನಪಿದೆಯೇ? ಒಬ್ಬ ನನ್ನ ಹೊಟ್ಟೆಪಾಡು ಎಂದ, ಇನ್ನೊಬ್ಬ ಕೂಲಿ ಕೆಲಸ ಎಂದ. ಮತ್ತೊಬ್ಬ ಸಾವಿರಾರು ಜನಕ್ಕೆ ಭಗವದ್ದರ್ಶನ ಮಾಡಿಸುವ ಕೆಲಸ ಎಂದ.. ನಿಮ್ಮ ದೃಷ್ಠಿಕೋನ ಯಾವುದು?)
೫. ಸಣ್ಣ-ಸಣ್ಣ ತಪ್ಪುಗಳನ್ನು ದೊಡ್ಡದಾಗಿ ಮಾಡಬೇಡಿ, ಹಿರಿದಾಗಿ ಯೋಚಿಸಿ.


ಹಿರಿದಾಗಿ ಯೋಚಿಸುವುದರಿಂದ ನಿಮ್ಮ ಸೃಜನಶೀಲತೆ ಹೆಚ್ಚಬೇಕು. ಸೃಜನಶೀಲರಾಗಿ ಯೋಚಿಸುವತ್ತ ಮುಂದಿನ ಹೆಜ್ಜೆ ಇಡಬೇಕು. ಇದಕ್ಕೆ.
೧. ಮೊದಲನೆಯದಾಗಿ ಯಾವುದೇ ಕೆಲಸವಿರಲಿ ಅದು ಸಾಧ್ಯ ಎಂದು ನಂಬಿ.
೨. ಸಂಪ್ರದಾಯ ನಿಮ್ಮನ್ನು ವಿಕಲಚೇತನರನ್ನಾಗಿಸಲು ಬಿಡಬೇಡಿ. ಇದುವರೆಗೂ ಯಾರು ಮಾಡಿಲ್ಲದಿದ್ದರೆ ನೀವೇಕೆ ಮಾಡಬಾರದು ಎಂದು ಕೇಳಿಕೊಳ್ಳಿ. ನೀವು ಹಿರಿದಾಗಿ ಯೋಚಿಸುತ್ತಿದ್ದರೆ ನೀವು ತಪ್ಪು ಮಾಡುವ ಸಾಧ್ಯತೆ ಕಡಿಮೆ.
೩. ಪ್ರತಿದಿನವೂ " ನಾನು ಇನ್ನಷ್ಟು ಚೆನ್ನಾಗಿ ಈ ಕೆಲಸವನ್ನು ಮಾಡಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿಕೊಳ್ಳಿ.
೪. ಪ್ರತಿದಿನವೂ " ನಾನು ಈ ಕೆಲಸವನ್ನು ಇನ್ನಷ್ಟು ಮಾಡಬಹುದೇ?" ಎಂದು ಪ್ರಶ್ನಿಸಿಕೊಳ್ಳಿ.
೫. ಪ್ರಶ್ನೆ ಕೇಳುವುದನ್ನೂ, ಬೇರೆಯವರ ಚಿಂತನೆಗಳನ್ನು ಆಲಿಸುವುದನ್ನೂ ಅಭ್ಯಾಸ ಮಾಡಿಕೊಳ್ಳಿ.
೬. ನಿಮ್ಮ ಭಾವನೆಗಳನ್ನೂ, ಚಿಂತನೆಗಳನ್ನು ಹಿಗ್ಗಿಸಿ. ಒಟ್ಟಾರೆಯಾಗಿ ಹೇಳುವುದಾದರೆ ಮಿದುಳಿಗೆ ಇನ್ನಷ್ಟು ಕೆಲಸ ಕೊಡಿ. ಕೆಲಸ ಹೆಚ್ಚಾದಷ್ಟೂ ಮಿದುಳು ಚುರುಕಾಗುತ್ತದೆ. (ನಿದ್ದೆ, ಜ್ಞಾನ , ಹಸಿವು ಇವು ತೃಪ್ತಿ ಪಡಿಸಿದಷ್ಟೂ ಹೆಚ್ಚಾಗುತ್ತದೆಂಬುದೊಂದು ಸಂಸ್ಕೃತ ಸುಭಾಷಿತ)

ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಮೊದಲು ನೀವು ಪ್ರಮುಖ ವ್ಯಕ್ತಿಯೆಂಬ ಭಾವನೆ ನಿಮಗೇ ಬರಬೇಕು. ಅದಕ್ಕೆ
೧. ಪ್ರಮುಖ ವ್ಯಕ್ತಿ ನೀವೆಂದುಕೊಳ್ಳಿ. ಮತ್ತು ಹಾಗೇ ವರ್ತಿಸಿ
೨. ನಿಮ್ಮ ಕೆಲಸ ಮುಖ್ಯವಾದುದು ಎಂಬುದು ಸದಾ ನಿಮ್ಮ ಅರಿವಿನಲ್ಲಿರಲಿ.
೩. ದಿನದಲ್ಲಿ ಹಲವಾರು ಬಾರಿ ನಿಮ್ಮನ್ನು ನೀವೇ ಹೊಗಳಿಕೊಳ್ಳಿ.
೪. ನಿಮ್ಮನ್ನು ನೀವೇ "ಇದು ಮುಖ್ಯ /ಪ್ರಮುಖ ವ್ಯಕ್ತಿಗಳು ಯೋಚಿಸುವ ರೀತಿಯೇ?" ಎಂದು ಕೇಳಿಕೊಳ್ಳಿ. ಉತ್ತರ "ಇಲ್ಲ"ವೆಂದಾದರೆ ಪ್ರಮುಖ ವ್ಯಕ್ತಿಗಳು ಯೋಚಿಸುವ ರೀತಿ ಯೋಚಿಸಲು ಪ್ರಾರಂಭಿಸಿ.

ನಿಮ್ಮ ಯಶಸ್ಸಿಗೆ ನಿಮ್ಮ ಸುತ್ತಲಿನ ಪರಿಸರದ ಕೊಡುಗೆ ಬಹು ಮುಖ್ಯ. ಅದನ್ನು ಸರಿಯಾದ ರೀತಿಯಲ್ಲಿ ಕಾಯ್ದಿಟ್ಟುಕೊಳ್ಳಿ. ನಿಮ್ಮ ಯಶಸ್ಸನ್ನು ನಿಮ್ಮ ಪರಿಸರ ರೂಪಿಸುವಂತೆ ಮಾಡಿ. ಅದಕ್ಕೆ.

೧. ನಿಮ್ಮ ಸುತ್ತಲಿನ ಪರಿಸರದ ಬಗ್ಗೆ ಸದಾ ನಿಗಾ ಇರಲಿ.
೨. ನಿಮ್ಮ ಪರಿಸರ ನಿಮ್ಮಲ್ಲಿ ಉಲ್ಲಾಸ ತುಂಬುವಂತಿರಲಿ. ಅದನ್ನು ನೀವೇ ಹಾಗೆ ಮಾಡಿಕೊಳ್ಳಬೇಕು. ನಿಮ್ಮ ಪರಿಸರ ನಿಮ್ಮ ವಿರುದ್ದವಿದ್ದರೆ ಗೆಲುವು ಕಷ್ಟ.
೩. ಸಣ್ಣದಾಗಿ ಯೋಚಿಸುವ ವ್ಯಕ್ತಿಗಳು ನಿಮ್ಮ ಕಾಲೆಳೆಯಲು ಬಿಡಬೇಡಿ. ಅವರನ್ನು ದೂರ ಇಡಿ.
೪. ನಿಮಗೆ ಸಲಹೆ ಬೇಕಾದಾಗ ಯಶಸ್ವಿ ವ್ಯಕ್ತಿಗಳಿಂದ ಪಡೆಯಿರಿ, ಯಾರಿಗೆ ಯಶಸ್ಸಿನ ಅನುಭವ ಇರುವುದಿಲ್ಲವೋ ಅವರು ಯಶಸ್ವಿಯಾಗುವ ಸಲಹೆ ನೀಡುವುದಿಲ್ಲ. ಯಶಸ್ವಿಯೆಂದರೆ ಬರೀ ಹಣವಲ್ಲ.
೫. ಮಾನಸಿಕವಾಗಿ ಸದಾ ಪ್ರಪುಲ್ಲಿತರಾಗಿರಿ.
೬. ಥಾಟ್- ಪಾಯಿಸನ್ ಹಿಂಜರಿಕೆಯನ್ನು ನಿಮ್ಮ ಪರಿಸರದಿಂದ ದೂರವಿಡಿ.
೭. ನೀವು ಮಾಡುವ ಕೆಲಸಗಳಲ್ಲಿ ಅದು ಯಾವುದೇ ಇರಲಿ ಮೊದಲನೇ ದರ್ಜೆಯ ಕೆಲಸವಾಗಿರುವಂತೆ ನೋಡಿಕೊಳ್ಳಿ.
೮. ಮೊದಲು ಸೇವೆ ಆಮೇಲೆ ಲಾಭ. ನೀವು ಮಾಡುವ ಕೆಲಸದ ತಕ್ಷಣದ ಪ್ರತಿಫಲಾಪೇಕ್ಷೆ ಧೀರ್ಘಕಾಲೀನವಾಗಿ ದುಷ್ಪರಿಣಾಮ ಬೀರಬಹುದು. ಮೊದಲು ನೀವೆ ಹೇಗೆ ಕೆಲಸ ಮಾಡಿಕೊಡಬಹುದೆಂದು ಯೋಚಿಸ್. ಲಾಭ ನಷ್ಟಗಳ ಗಣನೆ ನಂತರದ್ದು.
೯. ನಾಳೆ ಮಾಡುವ ಕೆಲಸ ಇಂದೇ ಮಾಡಿ (ಇದನ್ನು ನಮ್ಮ ದಾಸರೇ ಹೇಳಿದ್ದಾರಲ್ಲವೇ .. ಹೌದು. ಹಿರಿಯ ಚೇತನಗಳು ಒಂದೇ ತೆರನಾಗಿ ಚಿಂತಿಸುತ್ತಾರೆ.. Great people think alike)
೧೦. ನೀವು ಎಲ್ಲಿಗೆ ತಲುಪಬೇಕು ಎನ್ನುವುದು ನಿಮಗೆ ಧೃಡವಾಗಿರಲಿ. ಹತ್ತು ವರುಷಗಳ ನಂತರ ನೀವು ಏನಾಗಿರಬೇಕೆನ್ನುವುದು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿರಲಿ.
೧೧. ಈ ಹತ್ತು ವರುಷಗಳಲ್ಲಿ ನೀವು ಮಾಡಬೇಕೆಂದುಕೊಂಡ ವಿಷಯಗಳ ಪಟ್ಟಿ ಮಾಡಿ ಮತ್ತು ಅದನ್ನು ಮಾಡಲು ಏನು ಮಾಡಬೇಕೆಂದು ಚಿಂತಿಸಿ.
೧೨. ನಿಮ್ಮ ಆಸೆಗಳಿಗೆ ನೀವೇ ಶರಣಾಗಿ.
೧೩. ತಿಂಗಳು-ತಿಂಗಳಿಗೊಂದು ಗುರಿ ನಿಗದಿಪಡಿಸಿ. ಅದನ್ನು ಸಾಕಾರಗೊಳಿಸಲು ಪ್ರತಿದಿನ ಕೆಲಸ ಮಾಡಿ.
೧೪. ಸೋಲುಗಳನ್ನು ಮರೆತು ಮತ್ತೆ ಕೆಲಸ ಮಾಡಲು ಮುನ್ನಡೆಯಿರಿ
೧೫. ನಿಮ್ಮ ಮೇಲೇ ಬಂಡವಾಳ ಹೂಡಿ. ಅಂದರೆ ನಿಮಗೆ ಬೇಕಾದ ತರಬೇತಿ, ಪುಸ್ತಕ, ಜ್ಞಾನ ಇವುಗಳಿಗೆ ಅಗತ್ಯವಿದ್ದರೆ ಖರ್ಚು ಮಾಡಲು ಹಿಂಜರಿಯಬೇಡಿ.

ಇವು ನಿಮ್ಮನ್ನು ನಿಸ್ಸಂದೇಹವಾಗಿ ಒಬ್ಬ ನಾಯಕನನ್ನಾಗಿ ಮಾಡುತ್ತವೆ. ನಿಮ್ಮ ನಾಯಕತ್ವ ಮತ್ತಷ್ಟು ಪರಿಣಾಮಕಾರಿಯಾಗಬೇಕಾದರೆ..
೧. ನಿಮ್ಮ ಸುತ್ತಲಿನ ಜನರೊಡನೆ, ನಿಮ್ಮ ಪ್ರಭೆಯ ಪರಿಧಿಯಲ್ಲಿ ಬರುವ ಜನರೊಡನೆ ಚಿಂತನೆಗಳನ್ನು ಹಂಚಿಕೊಳ್ಳಿ.
೨. ಎಲ್ಲರೊಳಗೊಂದಾಗಿ.
೩. ಪ್ರಗತಿಯ ಬಗ್ಗೆ ಯೋಚಿಸುತ್ತಿರಿ
೪. ಪ್ರತಿ ದಿನವೂ ಸ್ವಲ್ಪ ಸಮಯ ಒಂಟಿಯಾಗಿರಿ,

ಸುತ್ತಲಿನ ಸಣ್ಣ ಜನ ನಿಮ್ಮ ಕಾಲೆಳೆದರೆ... ಹಿರಿದಾಗಿ ಚಿಂತಿಸಿ

"ಬುದ್ದಿವಂತ ಮನದ ಒಡೆಯನಾದರೆ, ಮೂರ್ಖ ಮನದ ಗುಲಾಮ" ಮರೆಯದಿರಿ.

ಮೇಘದೂತ ಪತ್ರಿಕೆಗೆ ಬರೆದ ಲೇಖನ. ನನ್ನ ಹಿಂದಿನ ಇಂಗಿಷ್ ಪೋಸ್ಟ್ ಒಂದರ ಕನ್ನಡ ಅನುವಾದ.

Tuesday, February 02, 2010

logical volume creation

lvdisplay
lvcreate -n /var/www/sw -size 500g my
lvcreate -n var-www-sw --size 500g my
mkfs.ext3 /dev/my/var-www-sw
mkdir /var/www/sw
mount /dev/my/var/www/sw /var/www/sw

check /etc/fstab
add entry as follows if not exists
/dev/mapper/my-var-www-sw /var/www/sw ext3 defaults 0 2