ಮನದ ಮಣ್ಣಲ್ಲಿ ಸೇರಿ
ಭಾವದ ಮಳೆಗೆ ಚಿಗುರಿ,
ಬೆಳೆದ ಕನಸಿನ ಗಿಡದ
ಬುಡದಲ್ಲಿ ಒಟ್ಟಾಗಿ ಬಿಟ್ಟಿದೆ
ಕನಸುಗಳ ಕಡಲೇಕಾಯಿ ಗೊಂಚಲು
ಅದನ್ನೂ ಬಿಡದೆ ಹುಡುಕಿ
ಬುಡ ಸಮೇತ ಕಿತ್ತು ಸಿಪ್ಪೆ ಬಿಡಿಸಿ
ಹೃದಯದ ಬಣ್ಣದ ಕಾಳುಗಳ
ಹುರಿದು ಚಿತ್ರಾನ್ನ ಅವಲಕ್ಕಿಗಿಕ್ಕಿ
ಚೌಚೌ ಎಂದು ಬೆರೆಸಿದಿರಂತೆ
ನವಿರು ಹಸಿರು ಭಾವನೆಗಳಂತೆ
ಮೆದುವಾಗಿದ್ದ ಕಾಳುಗಳನ್ನು ಮತ್ತೆ
ಬಿರುಬಿಸಿಲಲ್ಲಿ ಒಣಗಿಸಿ ಆರ್ದ್ರತೆಯ
ಆವಿಯಾಗಿಸಿ, ಚಟ್ನಿ ಪಲ್ಯ,ಕುರುಕು
ಎಂದೆಲ್ಲಾ ಅಣಿ ಮಾಡಿ ಚಪ್ಪರಿಸಿದಿರಂತೆ
ಆರ್ದ್ರತೆಯ ಕಳೆದು ಕಲ್ಲಾಗಿದ್ದ
ಕಡಲೇಕಾಯಿ ಬೀಜಗಳ ಮತ್ತೆ
ಗಾಣದಲಿ ಅರೆದು ಕಣ್ಣೀರಿನ
ಎಣ್ಣೆ ತೆಗೆದು, ಕಾಯಿಸಿ, ಬಜ್ಜಿ ಬೋಂಡ
ಚಕ್ಕುಲಿ, ಪಕೋಡಾ ಕಬಾಬುಗಳ ಮಾಡಿ ಸವಿದಿರಂತೆ.
ಕನಸುಗಳೂ ಅಷ್ಟೇ, ಕಡಲೆಕಾಯಿ ಬೀಜಗಳಂತೆ
ನೀವು ಎಷ್ಟೇ ಹುರಿದು, ಕರೆದು ಅರೆದು,
ಹಿಂಡಿ ಹಿಪ್ಪೇ ಮಾಡಿದರೂ, ಉಳಿದ ಒಂದೆರಡು
ಬೀಜಗಳು ಅಲ್ಲಿಲ್ಲಿ ಮಣ್ಣಲ್ಲಿ ಸೇರಿ ಮಳೆಯೊಂದಿಗೆ ಚಿಗುರಿ
ಗೊಂಚಲು ಗೊಂಚಲು ಕಡಲೇಕಾಯಿ ಬಿಡುವಂತೆ
ಮತ್ತೆ ಮತ್ತೆ ಚಿಗುರೊಡೆದು ಬರುತ್ತಲೇ ಇರುತ್ತವೆ.
- ಮಂಕ
- ೨೭/೦೫/೨೦೨೫
No comments:
Post a Comment