Pages

Wednesday, February 15, 2017

ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್



ನಾಸ್ಟ್ರಡಮಸ್ ನುಡಿದ ಭವಿಷ್ಯವೋ, ಮೈಲಾರ ಲಿಂಗದ  ಗೊರವಪ್ಪ ನುಡಿದ ಕಾರ್ಣಿಕವೋ, ಅಥವಾ ಕೊಡೀ ಮಠದ ನಾಡೀ ಗ್ರಂಥದ ನುಡಿಗಳೋ, ಒಟ್ಟಿನಲ್ಲಿ ಎಲ್ಲವೂ ಒಗಟು ಒಗಟು.  ಅದರೊಳಗಣ ಒಗಟು ಸರಳವಾದದ್ದು. ಕಾರ್ಣಿಕದ ಕಾಣ್ಕೆ ಅವರವರ ಮನಸಿಗೆ ಅವರ ಭಾವಕ್ಕೆ,  ಅಳತೆ –ವ್ಯಾಪ್ತಿ –ಪ್ರಾಪ್ತಿಗಳಿಗೆ ಬಿಟ್ಟದ್ದು.

ಈ ವರ್ಷದ ಮೈಲಾರ ಲಿಂಗನ ಕಾರ್ಣಿಕ ನುಡಿದ “ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್” ಎನ್ನುವ ಕಾರಣಿಕದ ಅರ್ಥ  ಹುಡುಕುತ್ತಾ ಎರಡು ರಾತ್ರಿಗಳೇ ಕಳೆದು  ಹೋದವು. ಈ ಘಳಿಗೆಯಲ್ಲಿ ನನಗೆ ಹೊಳೆದಿದ್ದನ್ನು ಇಲ್ಲಿ ಬರೆಯುತ್ತಿದ್ದೇನೆ.
ಮಾಡಿಟ್ಟ ಅಡಿಗೆ ಹಾಗೇ ಕಾಯುತ್ತಾ ಉಳಿದು ಹಲಸಿ ಹೋಗುವುದು ಯಾವಾಗ..? ಊಟಕ್ಕೆ ಹಕ್ಕುದಾರನಾದ ಯಜಮಾನ ಬರದೇ ಹೋದಾಗ ತಾನೇ?  ಅವನು ಮನೆಗೆ ಬರದಿದ್ದರೆ, ಅಡಿಗೆ ಮಾಡಿದ ಗೃಹಿಣಿಯೂ ಹಸಿದೇ ಕಾಯುವಳು. ಮಾಡಿಟ್ಟ ಅಡಿಗೆ ತನ್ನ ಸಮಯ ಮುಗಿಯುತ್ತಿದ್ದಂತೆ ಹಳಸಿ ಹೋಗುವುದು. ಈ ಯಜಮಾನ ತನ್ನ ಕಾಯುತ್ತಿರುವ ಮಡದಿ ಮಕ್ಕಳನ್ನೂ ಬಿಟ್ಟು ಹೊರಗಿರುವನೆಂದರೆ, ಅವನೇನು ದಂಡಿನಲ್ಲಿರುವವನೇ? ಶತ್ರುಗಳ ಸೈನ್ಯ ಏರಿ ಬಂದಿದೆಯೇ? ದೇಶ ಕಾಯುತ್ತಾ.. ತನ್ನ ಕಾಯುತ್ತಿರುವ ಮಡದಿ ಮಕ್ಕಳು ಮತ್ತು ಅಂಬಲಿಯನ್ನು ಮರೆತು ಬಿಟ್ಟನೇ? ಅವನಿಗೆ ಕಾದು ಮಡದಿ ಮಕ್ಕಳು ಸುಸ್ತಾದರೇ?
ಜವರಾಯ ಕಂಬಳಿ ಬೀಸಿ ಕಾಯುತ್ತಿರುವನೇ? ಕಾಯುತ್ತಿರುವ ಮಡದಿ ಮಕ್ಕಳನ್ನು ಕಾಯಿಸಿ, ಮಾಡಿಟ್ಟ ಅಂಬಲಿ ಹಳಸಿ, ಮನೆಯೊಡೆಯ ಜವರಾಯನ ಕಂಬಳಿ ಹೊದ್ದು ಹೊರಟುಬಿಟ್ಟನೇ ?
ಅಂದರೆ ನಮ್ಮ ಮುಂದೆ ಯುದ್ದವೊಂದು ಬರಲಿದೆಯೇ..?


No comments:

Post a Comment